ಬೆಂಗಳೂರು: ಅಂತರರಾಷ್ಟ್ರೀಯ ವೈಮಾಂತರಿಕ್ಷ ಸಮ್ಮೇಳನವು ಜೂನ್ 2 ಮತ್ತು 3ರಂದು ಬೆಂಗಳೂರಿನಲ್ಲಿ ನಡೆಯಲಿದೆ.
‘ಎಸ್ಎಇ ಇಂಡಿಯಾ’ ಆಯೋಜಿಸಿರುವ ಈ ಸಮ್ಮೇಳನವು ಎರಡನೇಯ ಆವೃತ್ತಿಯಾಗಿದೆ. ಎಚ್ಎಎಲ್ ಮ್ಯಾನೇಜ್ಮೆಂಟ್ ಅಕಾಡೆಮಿ ಹಾಗೂ ’ಎಸ್ಎಇ ಇಂಟರ್ನ್ಯಾಷನಲ್’ ಸಹಭಾಗಿತ್ವದಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದೆ.
ವೈಮಾಂತರಿಕ್ಷ ವಲಯದಲ್ಲಿನ ಪ್ರಮುಖ ಬೆಳವಣಿಗೆಗಳು, ಸವಾಲುಗಳು ಮತ್ತು ಅವಕಾಶಗಳು ಹಾಗೂ ಕೋವಿಡ್ ನಂತರದ ಉದ್ಯಮದ ಭವಿಷ್ಯದ ಕುರಿತು ಸಮ್ಮೇಳನದಲ್ಲಿ ಪ್ರಮುಖವಾಗಿ ತಜ್ಞರು ಚರ್ಚಿಸಲಿದ್ದಾರೆ. ವೈಮಾಂತರಿಕ್ಷ ವೃತ್ತಿಪರರಿಗೆ ಹಾಗೂ ರಾಷ್ಟ್ರೀಯ ರಕ್ಷಣಾ ಪ್ರಯೋಗಾಲಯಗಳ ತಜ್ಞರಿಗೆ ಈ ಸಮ್ಮೇಳನವು ಹಲವು ಅವಕಾಶಗಳನ್ನು ಒದಗಿಸಲಿದೆ.
’2020ರಲ್ಲಿ ನಡೆಸಿದ ಸಮ್ಮೇಳನ ಯಶಸ್ವಿಯಾಗಿತ್ತು. ಈ ಬಾರಿ ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್, ಎಲೆಕ್ಟ್ರಿಕ್ ಮೊಬಿಲಿಟಿ, ರೊಬೊಟಿಕ್ಸ್ ಸೇರಿದಂತೆ ಉದ್ಯಮದಲ್ಲಿನ ಪ್ರಸ್ತುತ ಬೆಳವಣಿಗೆ ಹಾಗೂ ಡ್ರೋನ್ಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆಗಳು ನಡೆಯಲಿವೆ’ ಎಂದು ಎಸ್ಇಎ ಇಂಡಿಯಾ ಉಪ ಮಹಾನಿರ್ದೇಶಕ ವೆಂಕಟಗಿರಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೋಯಿಂಗ್ ಇಂಡಿಯಾ ಮುಖ್ಯ ಎಂಜಿನಿಯರ್ ಅಹ್ಮದ್ ಎಲ್ಷೆರ್ಬಿನಿ, ‘ಏರೋಕಾನ್–2022ನಲ್ಲಿ ಅತ್ಯುತ್ತಮ ತಜ್ಞರು, ಸಂಶೋಧಕರು ಪಾಲ್ಗೊಳ್ಳಲಿದ್ದಾರೆ. ಭಾರತದಲ್ಲಿನ ವೈಮಾನಿಕ ಕ್ಷೇತ್ರವು ಸಾಧಿಸುತ್ತಿರುವ ಪ್ರಗತಿಯಲ್ಲಿ ನಾವು ಸಹಭಾಗಿತ್ವ ಹೊಂದಲು ಹೆಮ್ಮೆ ಪಡುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.