ADVERTISEMENT

ಕೃಷಿ ವಿಶ್ವವಿದ್ಯಾಲಯಗಳ ಯುವಜನೋತ್ಸವ 13ರಿಂದ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 20:26 IST
Last Updated 9 ಮಾರ್ಚ್ 2023, 20:26 IST

ಬೆಂಗಳೂರು: ‘21ನೇ ಅಖಿಲ ಭಾರತ ಅಂತರ ಕೃಷಿ ವಿಶ್ವವಿದ್ಯಾಲಯಗಳ ಯುವಜನೋತ್ಸವ ಮಾ. 13ರಿಂದ 17ರವರೆಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಡೆಯಲಿದೆ’ ಎಂದು ಬೆಂಗಳೂರು ಕೃಷಿ ವಿ.ವಿಯ ಕುಲಪತಿ ಎಸ್.ವಿ. ಸುರೇಶ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಯುವಜನೋತ್ಸವವು ವಿವಿಧ ಭಾರತೀಯ ಸಂಸ್ಕೃತಿಗಳನ್ನು ಸಂಪ‍ರ್ಕಿಸುವ ಮೂಲಕ ಭಾರತೀಯ ಕೃಷಿಯನ್ನು ಸಂಯೋಜಿಸುವ ದೃಷ್ಟಿ ಹೊಂದಿದೆ. ಕೃಷಿ ವಿ.ವಿಯ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ದೇಶದ ವಿವಿಧ ರಾಜ್ಯಗಳ 59 ಕೃಷಿ ವಿಶ್ವವಿದ್ಯಾಲಯಗಳ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.

‘ಸಂಗೀತ ವಿಭಾಗದಲ್ಲಿ ಭಾರತೀಯ ಲಘು ಸಂಗೀತ, ಭಾರತೀಯ ಸಮೂಹ ಗಾಯನ (ದೇಶ ಭಕ್ತಿ ಗೀತೆ), ಭಾರತೀಯ ಸಮೂಹ ಗಾಯನ (ಜಾನಪದ ಗೀತೆ), ನೃತ್ಯ ವಿಭಾಗದಲ್ಲಿ ಸಮೂಹ ನೃತ್ಯ (ಜಾನಪದ), ಸಾಹಿತ್ಯ ವಿಭಾಗದಲ್ಲಿ ರಸಪ್ರಶ್ನೆ, ವಾಕ್‌ ಸ್ಪರ್ಧೆ, ಚರ್ಚಾ ಸ್ಪರ್ಧೆ ಮತ್ತು ಆಶು ಭಾಷಣ, ರಂಗಭೂಮಿ ವಿಭಾಗದಲ್ಲಿ ಏಕಾಂಕ ನಾಟಕ, ಲಘು ಪ್ರಹಸನ, ಮೂಕಾಭಿನಯ ಮತ್ತು ಏಕ ಪಾತ್ರಾಭಿನಯ, ಲಿಲತ ಕಲೆ ವಿಭಾಗದಲ್ಲಿ ಸ್ಥಳದಲ್ಲಿ ಚಿತ್ರ ರಚನೆ, ಬಿತ್ತಿ ಪತ್ರ ರಚನೆ, ತುಣುಕು ಚಿತ್ರ ರಚನೆ, ಮಣ್ಣಿನ ಆಕೃತಿ ರಚನೆ, ರಂಗೋಲಿ ಮತ್ತು ವ್ಯಂಗ್ಯ ಚಿತ್ರ ರಚನೆಯಲ್ಲಿ ಸ್ಪರ್ಧೆಗಳು ನಡೆಲಿವೆ. ಒಟ್ಟು 5 ವಿಭಾಗಗಳಲ್ಲಿ 16 ಸ್ಪರ್ಧೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ತಮ್ಮ ಕೌಶಲಗಳನ್ನು ಪ್ರದರ್ಶಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

ಮಾ. 15ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಯುವಜನೋತ್ಸವನ್ನು ಉದ್ಘಾಟನೆ ಮಾಡಲಿದ್ದು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೇಂದ್ರ ಕೃಷಿ ರಾಜ್ಯ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ, ಕೈಲಾಶ್ ಚೌಧರಿ, ಸಚಿವರಾದ ಬಿ.ಸಿ. ಪಾಟೀಲ್, ಕೆ.ಸಿ. ನಾರಾಯಣಗೌಡ, ವಿ. ಸುನಿಲ್‌ ಕುಮಾರ್, ಸಂಸದ ಡಿ.ವಿ. ಸದಾನಂದ ಗೌಡ, ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಕಾರ್ಯದರ್ಶಿ ಹಿಮಾಂಶು ಪಾಠಕ್‌ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.