ಖಂಜಿರ, ಮೃದಂಗ ವಿದ್ವಾನ್ ಅಮೃತ್ ಎನ್.
ಬೆಂಗಳೂರು: ಖಂಜಿರ ಹಾಗೂ ಮೃದಂಗ - ಎರಡರಲ್ಲೂ ಆಕಾಶವಾಣಿಯ ಉನ್ನತ ಶ್ರೇಣಿ (ಎ ಟಾಪ್ ಗ್ರೇಡ್) ಪಡೆದ ವಿಶಿಷ್ಟ ಮತ್ತು ಅಪರೂಪದ ಸಾಧನೆಗಾಗಿ ವಿದ್ವಾನ್ ಅಮೃತ್ ಎನ್. ಅವರಿಗೆ ಶಿಷ್ಯರು ಮೇ 29ರ ಗುರುವಾರದಂದು ಗುರುವಂದನೆ ಕಾರ್ಯಕ್ರಮ ಏರ್ಪಡಿಸಿದ್ದಾರೆ.
ಜಯನಗರ 8ನೇ ಬ್ಲಾಕ್ನ ಶ್ರೀ ಜಯರಾಮ ಸೇವಾಮಂಡಳಿಯಲ್ಲಿ ಸಂಜೆ 6ರಿಂದ ನಡೆಯುವ ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ 44 ವರ್ಷಗಳ ಸಾಧನೆಯನ್ನೂ ಪರಿಗಣಿಸಿ ಗೌರವಿಸಲಾಗುತ್ತಿದೆ. ಅಮೃತ್ ಅವರ ಸಾಧನೆಗಾಗಿ ಈಗಾಗಲೇ ಗುರು ಕಲಾಶ್ರೀ, ಲಯ ಪ್ರತಿಭಾಮಣಿ ಹಾಗೂ ಖಂಜಿರ ಪ್ರವೀಣ ಮುಂತಾದ ಬಿರುದುಗಳು ಸಂದಿವೆ.
ಗಾನ ಕಲಾಭೂಷಣ, ವಿದ್ವಾನ್ ಆರ್.ಕೆ.ಪದ್ಮನಾಭ ಅವರು ಅಧ್ಯಕ್ಷತೆ ವಹಿಸಲಿದ್ದು, ಸಂಸ್ಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ, ಪಿಟೀಲು ವಾದಕ ಮೈಸೂರು ಎಂ. ಮಂಜುನಾಥ್, ಸಂಗೀತ ತಜ್ಞ ಎಂ.ಸೂರ್ಯಪ್ರಸಾದ್, 'ಅನನ್ಯ' ಸಂಸ್ಥೆಯ ಸಂಸ್ಥಾಪಕ ಆರ್.ವಿ.ರಾಘವೇಂದ್ರ ಮುಖ್ಯ ಅತಿಥಿಗಳಾಗಿರುವರು.
ಹಿರಿಯ ಮೃದಂಗ ಗುರುಗಳಾದ ವಿದ್ವಾನ್ ಎಂ.ವಾಸುದೇವ ರಾವ್ ಹಾಗೂ ವಿದ್ವಾನ್ ಎಂ.ವಿ.ಆನಂದ್ ಆಶೀರ್ವಚನ ನೀಡುವರು. ವಿದ್ವಾನ್ ಬಿ.ಎಸ್.ಪುರುಷೋತ್ತಮ್ ಅಭಿನಂದನಾ ಭಾಷಣ ಮಾಡುವರು.
2016ರಲ್ಲಿ ಖಂಜಿರ ವಾದನಕ್ಕಾಗಿ ಹಾಗೂ 2025ರಲ್ಲಿ ಮೃದಂಗ ವಾದನ ಕ್ಷೇತ್ರದಲ್ಲಿ ವಿದ್ವಾನ್ ಅಮೃತ್ ಅವರಿಗೆ ಭಾರತ ಸರಕಾರದ ಪ್ರಸಾರ ಭಾರತಿ ವತಿಯಿಂದ ಆಕಾಶವಾಣಿಯ ಎ ಟಾಪ್ ಗ್ರೇಡ್ ಗೌರವ ಲಭ್ಯವಾಗಿದೆ. ಹೀಗೆ ಎರಡು ವಿಭಾಗಗಳಲ್ಲಿ ಅತ್ಯುನ್ನತ ಶ್ರೇಣಿ ದೊರೆತಿರುವುದು ಸಂಗೀತ ಕ್ಷೇತ್ರದಲ್ಲಿ ಅಪರೂಪದ ಸಾಧನೆ. ಇದನ್ನು ಗುರುತಿಸಿ ಗುರುವಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶಿಷ್ಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.