ADVERTISEMENT

ಆಕ್ಸಿಜನ್ ಇಲ್ಲವೆಂದು ಆಂಬುಲೆನ್ಸ್ ಚಾಲಕನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 15:46 IST
Last Updated 30 ಜುಲೈ 2020, 15:46 IST
   

ಬೆಂಗಳೂರು: ಆಕ್ಸಿಜನ್ ಇಲ್ಲವೆಂಬ ಕಾರಣಕ್ಕೆ ರೋಗಿಯ ಸಂಬಂಧಿಕರು, ಆಂಬುಲೆನ್ಸ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಚಾಲಕ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.

ಭಾರತಿನಗರದ ತಿಮ್ಮಯ್ಯ ಬಡಾವಣೆ 75 ವರ್ಷದ ಅನ್ಸರ್ ಎಂಬುವರು ತೀವ್ರ ಉಸಿರಾಟ ತೊಂದರೆಯಿಂದ ಬಳುತ್ತಿದ್ದರು. ಸಂಬಂಧಿಕರು ತುರ್ತು ಕರೆ ಮಾಡಿ ಆ್ಯಂಬುಲೆನ್ಸ್ ಕರೆಸಿಕೊಂಡಿದ್ದರು.

ಸ್ಥಳಕ್ಕೆ ಆಂಬುಲೆನ್ಸ್ ತಂದಿದ್ದ ಚಾಲಕ ಯೋಗೇಶ್ವರ್, ಅನ್ಸರ್ ಅವರನ್ನು ಎಂ. ಎಸ್. ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆ ತಲುಪಿ 20 ನಿಮಿಷವಾದರೂ ಬೆಡ್‌ ಇಲ್ಲದ ಕಾರಣಕ್ಕೆ ದಾಖಲಿಸಿಕೊಂಡಿರಲಿಲ್ಲ. ಉಸಿರಾಟ ತೊಂದರೆ ತೀವ್ರಗೊಂಡು ಆಂಬುಲೆನ್ಸ್‌ನಲ್ಲೇ ಅನ್ಸರ್ ಸಾವನ್ನಪ್ಪಿದ್ದರು.

ADVERTISEMENT

ಅದರಿಂದ ಅಕ್ರೋಶಗೊಂಡ ರೋಗಿಯ ಸಂಬಂಧಿಕರು, ‘ಆ್ಯಂಬುಲೆನ್ಸ್‌ನಲ್ಲಿ ಆಕ್ಸಿಜನ್ ಏಕಿಲ್ಲ’ ಎಂದು ಪ್ರಶ್ನಿಸಿ ಚಾಲಕನ ಜೊತೆ ಜಗಳ ತೆಗೆದರು. ಆಂಬುಲೆನ್ಸ್‌ನಿಂದ ಚಾಲಕನನ್ನು ಹೊರಗೆ ಎಳೆದು ಹಲ್ಲೆ ಸಹ ಮಾಡಿದ್ದಾರೆ. ಹಲ್ಲೆ ವಿಡಿಯೊವನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಮೃತ ಅನ್ಸರ್ ಅವರನ್ನು ಗಂಟಲಿನ ದ್ರವ ಸಂಗ್ರಹಿಸಿರುವ ವೈದ್ಯರು, ಕೊರೊನಾ ಪರೀಕ್ಷೆಗಾಗಿ ಕಳುಹಿಸಿದ್ದಾರೆ.

ಸಚಿವ ಸುಧಾಕರ್ ಅಸಮಾಧಾನ; ಆಂಬುಲೆನ್ಸ್ ಚಾಲಕನ ಮೇಲಿನ ಹಲ್ಲೆ ಬಗ್ಗೆ ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ‘ಕರ್ತವ್ಯ ನಿರ್ವಹಿಸಿದ ಚಾಲಕನ ಮೇಲೆ ಹಲ್ಲೆ ನಿಜಕ್ಕೂ ಅಮಾನವೀಯ ವರ್ತನೆ. ಚಾಲಕ ಆಸ್ಪತ್ರೆಗೆ ದಾಖಲಿಸಲು ರೋಗಿಯನ್ನು ಕರೆತಂದರೆ ಈ ರೀತಿ ಹಲ್ಲೆ ಮಾಡಿರುವುದು ಸರಿಯಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.