ಬೆಂಗಳೂರು: ಕಚೇರಿಯೊಂದಕ್ಕೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್ಗಳನ್ನು ಕಸಿದು ಪರಾರಿಯಾಗಿದ್ದ 8 ಮಂದಿಯನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ₹80 ಸಾವಿರ ನಗದು, ಮೂರು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ನಾಲ್ಕು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
‘ಶ್ರೀಕಾಂತ ಯಾನೆ ಚಡ್ಡಿ (30), ಗೌತಮ್ ಯಾನೆ ಲಂಬೂ (25), ಅಚ್ಚಯ್ಯ ಯಾನೆ ಬೋಂಡಾ (34), ಜಯನೇಶಾ ಯಾನೆ ಉದಯ (22), ಎಸ್.ಹೇಮಂತ(22), ಕೆ.ಪ್ರತಾಪ್ (27), ನವೀನ್ (21) ಹಾಗೂ ಗಿರೀಶ ಯಾನೆ ಬಾಗಲ್ (22) ಬಂಧಿತರು. ಇವರು ಇದೇ 20ರ ರಾತ್ರಿ ಠಾಣೆ ವ್ಯಾಪ್ತಿಯ ಕಚೇರಿಗೆ ನುಗ್ಗಿ ಅಲ್ಲಿದ್ದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಬೀರುವಿನಲ್ಲಿದ್ದ ಹಣ ಕದ್ದಿದ್ದಲ್ಲದೇ ಮೊಬೈಲ್ಗಳನ್ನೂ ಕಸಿದುಕೊಂಡು ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.
‘ಇದೇ 22ರಂದು ಆರೋಪಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಕೃತ್ಯದಲ್ಲಿ ಭಾಗಿಯಾಗಿದ್ದ ಇತರ ಏಳು ಮಂದಿಯ ಹೆಸರು ಬಾಯ್ಬಿಟ್ಟಿದ್ದ. ಆತ ನೀಡಿದ ಮಾಹಿತಿಯ ಆಧಾರದಲ್ಲಿ ಉಳಿದವರನ್ನು ಬಂಧಿಸಲಾಯಿತು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.