ಬೆಂಗಳೂರು: ಕೆ.ಪಿ.ಅಗ್ರಹಾರ ಠಾಣೆಯ ವ್ಯಾಪ್ತಿಯ ಅಪಾರ್ಟ್ಮೆಂಟ್ ಸಮುಚ್ಚಯವೊಂದರ 18ನೇ ಮಹಡಿಯಿಂದ ಜಿಗಿದು ರವಿಚಂದ್ರ (27) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ರವಿಚಂದ್ರ, ಇಂದಿರಾನಗರದಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
‘ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ವಾಸವಿರುವ ಸ್ನೇಹಿತರನ್ನು ಭೇಟಿಯಾಗಲು ಭಾನುವಾರ ಸಂಜೆ ಬಂದಿದ್ದ ರವಿಚಂದ್ರ, ‘ನಾನು ಸೋಮವಾರ ಬೆಳಿಗ್ಗೆ ಮುಂಬೈಗೆ ಹೋಗಬೇಕು. ವಿಮಾನ ನಿಲ್ದಾಣದವರೆಗೆ ಬಿಟ್ಟುಬನ್ನಿ’ ಎಂದು ಕೋರಿದ್ದ. ಅದಕ್ಕೆ ಸ್ನೇಹಿತರು ಒಪ್ಪಿದ್ದರು. ರಾತ್ರಿ ಎಲ್ಲರೂ ಸೇರಿ ಊಟ ಮಾಡಿ ಮಲಗಿದ್ದರು’ ಎಂದು ಕೆ.ಬಿ.ಅಗ್ರಹಾರ ಪೊಲೀಸರು ಹೇಳಿದರು.
‘ನಸುಕಿನಲ್ಲಿ ಫ್ಲ್ಯಾಟ್ನಿಂದ ಹೊರಬಂದಿದ್ದ ರವಿಚಂದ್ರ, 18ನೇ ಮಹಡಿಗೆ ಹೋಗಿ ಜಿಗಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದನ್ನು ಗಮನಿಸಿದ್ದ ಭದ್ರತಾ ಸಿಬ್ಬಂದಿ ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ತಿಳಿಸಿದರು.
ಮರಣಪತ್ರ ಪತ್ತೆ: ಆರೋಪಿ ಜೇಬಿನಲ್ಲಿ ಮರಣಪತ್ರ ಸಿಕ್ಕಿದೆ. ಅದರಲ್ಲಿರುವ ಕೈ ಬರಹ ರವಿಚಂದ್ರ ಅವರದ್ದಾ ಎಂಬುದನ್ನು ತಿಳಿದುಕೊಳ್ಳಲು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
‘ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು ಎಂದು ನನಗೆ ಗೊತ್ತಿದೆ. ಆದರೂ ನಾನು ಈಗಾಗಲೇ ಬಹಳ ತಪ್ಪು ಮಾಡಿದ್ದೇನೆ. ಕೊನೆಯದಾಗಿ ಸ್ನೇಹಿತರ ಜೊತೆ ಊಟ ಮಾಡೋಣವೆಂದು ಇಲ್ಲೀಗೆ ಬಂದಿದ್ದೆ. ನನ್ನ ಈ ಸಾವಿಗೆ ನಾನೇ ಕಾರಣ’ ಎಂದು ಮರಣಪತ್ರದಲ್ಲಿ ರವಿಚಂದ್ರ ಬರೆದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.