ADVERTISEMENT

ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 6:58 IST
Last Updated 30 ಜುಲೈ 2021, 6:58 IST

ಬೆಂಗಳೂರು: ವೈದ್ಯಕೀಯ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆತಂದಿದ್ದ ವೇಳೆ ಪರಾರಿಯಾಗಿದ್ದ ಆರೋಪಿ ಕಿರಣ್‌ಕುಮಾರ್‌ ಎಂಬಾತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಎನ್‌ಡಿಪಿಎಸ್ ಕಾಯ್ದೆಯಡಿ ಕಿರಣ್‌ಕುಮಾರ್‌ನನ್ನು ಬಂಧಿಸಿದ್ದ ಜೆ.ಪಿ.ನಗರ ಪೊಲೀಸರು, ವೈದ್ಯಕೀಯ ಪರೀಕ್ಷೆಗಾಗಿ ಆತನನ್ನು ಜುಲೈ 13ರಂದು ಆಸ್ಪತ್ರೆಗೆ ಕರೆತಂದಿದ್ದರು. ಅದೇ ಸಂದರ್ಭದಲ್ಲಿ ಪೊಲೀಸರನ್ನು ತಳ್ಳಿ ಆತ ಪರಾರಿಯಾಗಿದ್ದ. ಈ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

‘ಹೆಡ್ ಕಾನ್‌ಸ್ಟೆಬಲ್ ಕೇಶವಮೂರ್ತಿ ಅವರು ಕಿರಣ್‌ಕುಮಾರ್‌ನನ್ನು ಕೈಗೆ ಕೋಳ ಹಾಕಿ ಆಸ್ಪತ್ರೆಗೆ ಕರೆತಂದಿದ್ದರು. ಅದೇ ಸಂದರ್ಭದಲ್ಲೇ ಆರೋಪಿ, ಕೇಶವಮೂರ್ತಿ ಅವರನ್ನು ತಳ್ಳಿ ಬೀಳಿಸಿ ಕೋಳದ ಸಮೇತವೇ ಪರಾರಿಯಾಗಿದ್ದ. ಈ ಸಂಬಂಧ ಜೆ.ಪಿ.ನಗರ ಠಾಣೆ ಪಿಎಸ್‌ಐ ರಘುಪತಿ ಅವರು ದೂರು ನೀಡಿದ್ದರು’ ಎಂದು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಮೂಲಗಳು ಹೇಳಿವೆ.

ADVERTISEMENT

‘ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನ ಪರಿಶೀಲಿಸಲಾಯಿತು. ಆರೋಪಿ ಬಗ್ಗೆ ಸಿಕ್ಕ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿ ಆತನನ್ನು ಇದೀಗ ಬಂಧಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.