ADVERTISEMENT

ಐದು ತಿಂಗಳುಗಳಿಂದ ಸಂಬಳವಿಲ್ಲದ್ದಕ್ಕೆ ಆಶಾ ಕಾರ್ಯಕರ್ತೆಯರ ಆಕ್ರೋಶ

ನಾವೇನು ಉಪವಾಸ ಸಾಯಬೇಕೇ?

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2018, 19:54 IST
Last Updated 3 ಅಕ್ಟೋಬರ್ 2018, 19:54 IST
‘ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ’ದ ಸದಸ್ಯೆಯರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ಮಾಡಿದರು        –ಪ್ರಜಾವಾಣಿ ಚಿತ್ರ
‘ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ’ದ ಸದಸ್ಯೆಯರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ಮಾಡಿದರು        –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹ 18 ಸಾವಿರ ವೇತನ ನಿಗದಿಪಡಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ‘ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ’ದ ಸದಸ್ಯೆಯರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

‘ಕೈಗೆ‌ ಸಂಬಳ ದೊರೆತು ಐದು ತಿಂಗಳಾಗಿದೆ. ಕೆಲಸಕ್ಕೆ ತಕ್ಕ ವೇತನವನ್ನು ಸರ್ಕಾರ ಕೊಡುತ್ತಿಲ್ಲ. ಇದರಿಂದ ಜೀವನ ನಡೆಸುವುದು ಕಷ್ಟಕರವಾಗಿದೆ. ಸರ್ಕಾರ ನೀಡಿದ್ದ ಭರವಸೆ ಇದುವರೆಗೂ ಈಡೇರಿಲ್ಲ ನಾವೇನು ಉಪವಾಸ ಸಾಯಬೇಕೇ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ವಿಧವೆಯರು, ವಿಚ್ಛೇದಿತರು ಮತ್ತು ಗಂಡನ ದುಡಿಮೆಯ ಬೆಂಬಲವಿಲ್ಲದೆ ಕುಟುಂಬ ನಿರ್ವಹಿಸುತ್ತಿರುವ ಮಹಿಳೆಯರು ಈ ಕೆಲಸದಲ್ಲಿದ್ದಾರೆ. ಅವರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಬಾಕಿ ಇರುವ ವೇತನ ಕೂಡಲೇ ಪಾವತಿ ಮಾಡಬೇಕು’ ಎಂದು‌ ಸಂಘದ‌ ಜಿಲ್ಲಾ ಸಲಹೆಗಾರರಾದ ಟಿ.ಸಿ.ರಮಾ ಒತ್ತಾಯಿಸಿದರು.

ADVERTISEMENT

‘ಒಂದು‌ ಮನೆ ಸರ್ವೆಗೆ ₹ 1 ಮಾತ್ರಕೊಡುತ್ತಿದ್ದಾರೆ. ದಿನದ ಸಂಪೂರ್ಣಖರ್ಚು ನಮ್ಮದೇ. ಹೀಗಾದರೆ ಕುಟುಂಬ ನಿರ್ವಹಣೆ ಮಾಡುವುದು ಹೇಗೆ? ಪ್ರತಿದಿನ ಸರ್ವೆಗೆ ₹200 ನಿಗದಿಪಡಿಸಬೇಕು. ಅಲ್ಲದೆ, ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಮತ್ತು ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಬೇಕು' ಎಂದು ಅವರು ಆಗ್ರಹಿಸಿದರು.

‘ಮೇ ತಿಂಗಳಿನಿಂದ ಯಾರಿಗೂ ಸಂಬಳ‌ ಕೊಟ್ಟಿಲ್ಲ. ಪಾಸ್‌ಬುಕ್‌ ಸಮಸ್ಯೆ, ತಾಂತ್ರಿಕ ದೋಷ ಅಂತ ಏನೇನೋ ಸಬೂಬು ಹೇಳುತ್ತಾರೆ. ಏನಾದರೊಂದು ಕುಂಟು ನೆಪ ಹೇಳಿ ವೇತನ ನೀಡುತ್ತಿಲ್ಲ’ ಎಂದು ಜಿಲ್ಲಾ ಕಾರ್ಯದರ್ಶಿ ಶಿವರತ್ನ ಕಣ್ಣೀರಿಟ್ಟರು.

‘ಆಶಾ ನಿಧಿ ನೋಂದಣಿಯಲ್ಲಿ ಹಲವು ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಬೇಕು. ಕಾರ್ಯಕರ್ತೆಯರು ನಿರ್ವಹಿಸಿದ ಎಲ್ಲಾ ಕೆಲಸಗಳಿಗೆ ಪ್ರೋತ್ಸಾಹಧನ ಒದಗಿಸಬೇಕು. ಜನವರಿ 28ರಂದು ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.