ಬೆಂಗಳೂರು: ‘ನೀನು ಬಾಂಗ್ಲಾದೇಶವನು. ನಮ್ಮೊಂದಿಗೆ ಮಾತನಾಡಬೇಡ’ ಎಂದು ಸೆಕ್ಯುರಿಟಿ ಗಾರ್ಡ್ ಜತೆ ಜಗಳ ತೆಗೆದು ಅವರಿಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿಗಳ ಪೈಕಿ ಮೂವರು ಬೈಯಪ್ಪನಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಅಸ್ಸಾಂನ ಘನಪ್ರಸಾದ್, ಜಿತಿನ್ ಹಾಗೂ ಕಮಲ್ ಥಾಯ್ ಎಂಬುವರನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಇನ್ನೂ ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಹಲ್ಲೆಗೆ ಒಳಗಾಗಿರುವ ಮನ್ನಾ ಮಲಾಕಾರ್ (32) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಗಿದ್ದೇನು?: ಮಲಾಕಾರ್ ಹಾಗೂ ಆರೋಪಿಗಳು ಬಂಡೇನಗರದಲ್ಲಿ ಒಂದೇ ವಠಾರದಲ್ಲಿ ನೆಲೆಸಿದ್ದರು. ಮೇ 10ರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಕಿತ್ತಾಡಿಕೊಂಡಿದ್ದರು. ನಿದ್ರೆಗೆ ಭಂಗ ಆಗಿದ್ದರಿಂದ ಎದ್ದು ಬಂದ ಮಲಾಕಾರ್ ಬುದ್ಧಿ ಹೇಳಿದ್ದರು. ಅದಕ್ಕೆ ಕುಪಿತಗೊಂಡ ಆರೋಪಿಗಳು, ‘ನೀನು ಬಾಂಗ್ಲಾದೇಶದವ’ ಎಂದಿದ್ದರು. ಅದಕ್ಕೆ, ‘ನಾನೂ ಅಸ್ಸಾಂನವನೇ’ ಎಂದು ಮಲಾಕಾರ್ ಕೂಡ ವಾಗ್ವಾದಕ್ಕೆ ಇಳಿದಿದ್ದರು.
ಈ ಹಂತದಲ್ಲಿ ಆರೋಪಿಗಳು ಎದೆ ಹಾಗೂ ಕಿಬ್ಬೊಟ್ಟೆಗೆ ಚೂರಿ ಇರಿದು ಪರಾರಿಯಾಗಿದ್ದರು. ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ತಿಳಿಸಿದ್ದರು. ಸದ್ಯ ಅವರ ಆರೋಗ್ಯಸ್ಥಿತಿ ಸುಧಾರಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.