ADVERTISEMENT

ಸಂಗೀತ ನಿರ್ದೇಶಕನ ಮೇಲೆ ಹಲ್ಲೆ; ಪೊಲೀಸರಿಗೆ ಅನುಮಾನ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 20:19 IST
Last Updated 18 ಜುಲೈ 2021, 20:19 IST

ಬೆಂಗಳೂರು: ‘ನನ್ನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ಅವರು ರಾಜರಾಜೇಶ್ವರಿನಗರ ಠಾಣೆಗೆ ಮಾಹಿತಿ ನೀಡಿದ್ದು, ಘಟನೆ ಬಗ್ಗೆಯೇ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

‘ರಾಜರಾಜೇಶ್ವರಿನಗರದ ಸ್ನೇಹಿತರೊಬ್ಬರ ಮನೆಯಲ್ಲಿ ದಿವಂಗತ ನಟ ಸಂಚಾರಿ ವಿಜಯ್ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮವಿತ್ತು. ಅದರಲ್ಲಿ ಪಾಲ್ಗೊಂಡು ತಡರಾತ್ರಿ 2.30ರ ಸುಮಾರಿಗೆ ಕಾರಿನಲ್ಲಿ ಮನೆಗೆ ವಾಪಸು ಹೊರಟಿದ್ದೆ. ಮಾರ್ಗಮಧ್ಯೆ ನನ್ನನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ರಾಡ್‌ನಿಂದ ಹೊಡೆದು ಹೋಗಿದ್ದಾರೆ’ ಎಂದು ಕಿರಣ್ ಸುದ್ದಿಗಾರರ ಎದುರು ದೂರಿದ್ದಾರೆ.

ಘಟನೆ ಬಗ್ಗೆ ಠಾಣೆಗೆ ಮಾಹಿತಿ ಮಾತ್ರ ನೀಡಿರುವ ಕಿರಣ್, ಇದುವರೆಗೂ ದೂರು ಕೊಟ್ಟಿಲ್ಲ.

ADVERTISEMENT

ಈ ಬಗ್ಗೆ ಮಾತನಾಡಿರುವ ರಾಜರಾಜೇಶ್ವರಿನಗರ ಪೊಲೀಸರು, ‘ದೂರುದಾರ ಹೇಳಿದ ರೀತಿಯಲ್ಲಿ ಘಟನೆ ಆಗಿಲ್ಲ. ಅವರ ಹೇಳಿಕೆಯಲ್ಲಿ ಸಾಕಷ್ಟು ಅನುಮಾನಗಳಿವೆ. ಭಾನುವಾರ ನಸುಕಿನಲ್ಲಿ ಮಾಹಿತಿ ನೀಡಿ ಹೋಗಿರುವ ಕಿರಣ್, ಸ್ಪಷ್ಟ ದೂರು ನೀಡಲು ರಾತ್ರಿಯಾದರೂ ಠಾಣೆಗೆ ಬಂದಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಮಾಹಿತಿ ಆಧರಿಸಿ ಘಟನಾ ಸ್ಥಳದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಪರಿಶೀಲಿಸಲಾಗಿದೆ. ಕಿರಣ್ ಅವರೇ ತಮ್ಮ ಕಾರನ್ನು ಬೇರೊಂದು ಕಾರೊಂದರ ಮುಂದೆ ನಿಲ್ಲಿಸಿದ್ದರು. ಕಾರಿನಿಂದ ಇಳಿದವರ ಜೊತೆ ಅರ್ಧ ಗಂಟೆ ಮಾತನಾಡಿದ್ದಾರೆ. ಅದಾದ ನಂತರ, ಕೆಲವರು ಸ್ಥಳದಿಂದ ಓಡಿ ಹೋಗಿದ್ದಾರೆ. ಯಾರಿಂದ ಯಾರ ಮೇಲೆ ಹಲ್ಲೆಯಾಯಿತು ಎಂಬುದು ಸ್ಪಷ್ಟವಾಗಿಲ್ಲ. ಓಡಿ ಹೋದವರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದೂ ಹೇಳಿದರು.

ನಟ ಉಪೇಂದ್ರ ಅಭಿನಯದ ‘ಐ ಲವ್ ಯೂ’ ಸಿನಿಮಾಕ್ಕೆ ಕಿರಣ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.