ಬಂಧನ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ವಾಯು ವಿಹಾರ ಮಾಡುತ್ತಿದ್ದ ಟೆಕಿ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸಾರಾಯಿ ಪಾಳ್ಯ ಸಾದಿಕ್ ಲೇಔಟ್ ನಿವಾಸಿಗಳಾದ ಮೊಹಮದ್ ಯಾಸರ್, ಸೈಯದ್ ಅಯಾನ್, ಅಬ್ಬಾಸ್ ಮತೀನ್ ಅಲಿಯಾಸ್ ಮೇಜರ್, ಕೆ.ಜಿ.ಹಳ್ಳಿ ಲಿಡ್ಕರ್ ಕಾಲೊನಿ ನಿವಾಸಿ ಮವೀನ್ ಕ್ರಿಸ್ಟೋಫರ್ ಅಲಿಯಾಸ್ ಸಿಬ್ಬಿ ಮತ್ತು ಡಿ.ಜಿ.ಹಳ್ಳಿ ನಿವಾಸಿ ಸಿದ್ದಿಕ್ ಖಾನ್ ಅವರನ್ನು ಬಂಧಿಸಿ ₹ 2 ಸಾವಿರ ನಗದು, ಕಾರು, ಚಾಕು ಜಪ್ತಿ ಮಾಡಲಾಗಿದೆ.
ಸಂಪಿಗೆಹಳ್ಳಿ ಬಳಿಯ ಎಂಸಿಇಸಿಎಚ್ಎಸ್ ಲೇಔಟ್ ನಿವಾಸಿ ಅಭಿಷೇಕ್ ಅವರು ನವೆಂಬರ್ 22ರಂದು ಮನೆಯ ಮುಂಭಾಗದ ರಸ್ತೆಯಲ್ಲಿ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಾ ವಾಯುವಿಹಾರ ಮಾಡುತ್ತಿದ್ದರು. ಆಗ ಆರೋಪಿಗಳು ಕಾರಿನಲ್ಲಿ ಬಂದು ಅಭಿಷೇಕ್ ಅವರನ್ನು ಅಡಗಟ್ಟಿ ಹಲ್ಲೆ ನಡೆಸಿ, ಮೊಬೈಲ್, ₹5 ಸಾವಿರ ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅಬ್ಬಾಸ್ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದು, ಆತನ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಮೋಜು– ಮಸ್ತಿಗಾಗಿ ಹಣ ಸುಲಿಗೆ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.