ಬೆಂಗಳೂರು: ‘ಅಟಲ್ ಪಿಂಚಣಿ ಯೋಜನೆಯಡಿ 2021–22ನೇ ಸಾಲಿನಲ್ಲಿ 6.33 ಲಕ್ಷ ಫಲಾನುಭವಿಗಳನ್ನು ತಲುಪುವ ಗುರಿ ನಿಗದಿಪಡಿಸಲಾಗಿದೆ. ನವೆಂಬರ್ ಅಂತ್ಯದ ವೇಳೆಗೆ ರಾಜ್ಯದಲ್ಲಿ 2.77 ಲಕ್ಷ ಮಂದಿಗೆ ಮಾತ್ರ ಸವಲತ್ತು ಒದಗಿಸಲಾಗಿದೆ’ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್ಆರ್ಡಿಎ) ಕಾರ್ಯನಿರ್ವಾಹಕ ನಿರ್ದೇಶಕ ಅನಂತ ಗೋಪಾಲ್ದಾಸ್ ತಿಳಿಸಿದರು.
ಅಟಲ್ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆರಾಜ್ಯಮಟ್ಟದ ಬ್ಯಾಂಕರ್ಗಳ ಸಮಿತಿಯು (ಎಸ್ಎಲ್ಬಿಸಿ)ಪಿಎಫ್ಆರ್ಡಿಎ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪರಾಮರ್ಶನಾ ಸಭೆಯಲ್ಲಿ ಸೋಮವಾರ ಅವರು ಮಾತನಾಡಿದರು.
‘ಈ ಯೋಜನೆಯನ್ನು ರಾಜ್ಯದ ಎಲ್ಲಾ ಪ್ರದೇಶಗಳಿಗೆ ತಲುಪಿಸುವ ದಿಸೆಯಲ್ಲಿ ಬ್ಯಾಂಕ್ಗಳು ಕೆಲಸ ಮಾಡಬೇಕು. 2021–22ನೇ ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿರುವ ಗುರಿ ಸಾಧನೆಗೂ ಶ್ರಮಿಸಬೇಕು’ ಎಂದು ಅನಂತ ಗೋಪಾಲದಾಸ್ ಹೇಳಿದರು.
‘ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಪಿಂಚಣಿ ವ್ಯಾಪ್ತಿಗೆ ಒಳಪಟ್ಟ ಇತರರಿಗೂ ಯೋಜನೆ ತಲುಪಿಸಲು ಎಲ್ಲಾ ಬ್ಯಾಂಕ್ಗಳೂ ಪ್ರಯತ್ನಿಸಬೇಕು’ ಎಂದರು.
‘ರಾಜ್ಯದ ಪ್ರಮುಖ ಬ್ಯಾಂಕ್ಗಳ ಪೈಕಿ ಕೆನರಾ ಬ್ಯಾಂಕ್ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಕ್ರಮವಾಗಿ ಶೇ 65 ಮತ್ತು ಶೇ 63ರಷ್ಟು ಗುರಿ ಸಾಧಿಸಿವೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶೇ 74 ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶೇ 42ರಷ್ಟು ಗುರಿ ಸಾಧನೆ ಮಾಡಿವೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.