ADVERTISEMENT

‘ಜೈವಿಕ ತಂತ್ರಜ್ಞಾನದಿಂದ ಆತ್ಮನಿರ್ಭರ ಭಾರತ ನಿರ್ಮಾಣ’

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 7:51 IST
Last Updated 18 ಫೆಬ್ರುವರಿ 2021, 7:51 IST

ಬೊಮ್ಮನಹಳ್ಳಿ:‘ಜೈವಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿದ್ದಲ್ಲಿ ಆತ್ಮನಿರ್ಭರ್ ಭಾರತವನ್ನು ಕಟ್ಟಲು ಸಾಧ್ಯ. ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವ ಅವಕಾಶಗಳಿದ್ದು, ಈ ದಿಸೆಯಲ್ಲಿ ವಿದ್ಯಾರ್ಥಿಗಳನ್ನು ಅಧ್ಯಾಪಕರು ಸಜ್ಜುಗೊಳಿಸಬೇಕು’ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಮಾಜಿ ನಿರ್ದೇಶಕ ಡಾ. ಮನ್‌ಪ್ರೀತ್‌ ಸಿಂಗ್ ಮನ್ನಾ ಹೇಳಿದರು.

ಬೊಮ್ಮನಹಳ್ಳಿಯ ಆಕ್ಸ್‌ಫರ್ಡ್‌ ಎಂಜಿನಿಯರಿಂಗ್‌ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗವು ‘ಜೈವಿಕ ಆವಿಷ್ಕಾರಗಳ ಸಾಧ್ಯತೆ ಮತ್ತು ಉದ್ಯಮಶೀಲತೆ, ಪೇಟೆಂಟಿನ ಅವಕಾಶಗಳು ಹಾಗೂ ಉದ್ಯೋಗ ಸೃಷ್ಟಿ’ ಕುರಿತು ಹಮ್ಮಿಕೊಂಡಿದ್ದ ವರ್ಚುವಲ್‌ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೇವಲ ಬೋಧನೆಯಿಂದ ಸದೃಢ ದೇಶ ನಿರ್ಮಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಮನೋಭಾವ ರೂಪಿಸಲು ಅವರನ್ನು ಪ್ರೇರೇಪಿಸಬೇಕು. ಅದರ ಅವಕಾಶಗಳ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸಿ ಮಾರ್ಗದರ್ಶನ ಮಾಡಿದ್ದಲ್ಲಿ ಪ್ರತಿಭಾ ಪಲಾಯನ ತಡೆಯಬಹುದು’ ಎಂದರು.

ADVERTISEMENT

ತಿಂಗಳವರೆಗೆ ನಡೆಯುವ ಕಾರ್ಯಗಾರದಲ್ಲಿ ದೇಶದ ಪ್ರತಿಷ್ಠಿತ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳ ನುರಿತ ವಿಜ್ಞಾನಿಗಳು, ಸಂಶೋಧಕರು ಮತ್ತು ಪ್ರಾಧ್ಯಾಪಕರುಗಳು ಭಾಗಿಯಾಗಲಿದ್ದಾರೆ. ಡಿಬಿಟಿ, ಡಿಎಸ್‍ಟಿ, ಐಸಿಎಂಆರ್, ಕೆಎಸ್‍ಟಿಎಸ್‍ಟಿ, ವಿಟಿಪಿಸಿ, ಎನ್‍ಆರ್‌ಡಿಸಿ, ಐಐಟಿ, ಐಐಎಸ್‍ಸಿ, ಮುಂತಾದ ಪ್ರತಿಷ್ಠಿತ ಸಂಸ್ಥೆಗಳ ನುರಿತ ವಿಜ್ಞಾನಿಗಳು ಸಂಶೋಧಕರು ಮಾಹಿತಿ ವಿನಿಮಯ ಮಾಡಿಕೊಳ್ಳಲಿದ್ದಾರೆ.

ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಿ.ಇ. ರಂಗಸ್ವಾಮಿ ಉಪನ್ಯಾಸ ನೀಡಿದರು. ಆಕ್ಸ್‌ಫರ್ಡ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎಲ್.ವಿ.ಎಲ್. ನರಸಿಂಹರಾಜು ಅಧ್ಯಕ್ಷತೆ ವಹಿಸಿದ್ದರು. ಜೈವಿಕ ತಂತ್ರಜ್ಞಾನ ವಿಭಾಗದ ಡೀನ್ ಡಾ.ಬಿ.ಕೆ.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.