ಮಹಿಳೆ ಸಾವು
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಮದ್ಯದ ಅಮಲಿನಲ್ಲಿ ನಡೆದ ಜಗಳದಲ್ಲಿ ಗಾಯಗೊಂಡಿದ್ದ ಆಟೊ ಚಾಲಕ ಮೃತಪಟ್ಟಿರುವ ಘಟನೆ ರಾಜಗೋಪಾಲನಗರದ ಬಳಿ ನಡೆದಿದೆ.
ಬಸವನಕಟ್ಟೆ ನಿವಾಸಿ ಆಟೊ ಚಾಲಕ ರಂಗಸ್ವಾಮಿ (51) ಮೃತರು. ಆರೋಪಿ ವಿನಯ್ ಕುಮಾರ್ (24) ಎಂಬಾತನನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.
‘ರಂಗಸ್ವಾಮಿ ಹಾಗೂ ವಿನಯ್ ಕುಮಾರ್ ವೃತ್ತಿಯಲ್ಲಿ ಆಟೊ ಚಾಲಕರು. ಒಂದೇ ಬಡಾವಣೆಯ ನಿವಾಸಿಗಳು. ಮೇ 18ರ ರಾತ್ರಿ ಬಸವನಕಟ್ಟೆಯ ಬಾರ್ ಬಳಿ ರಂಗಸ್ವಾಮಿ ಕುಡಿದು ರಂಪಾಟ ಮಾಡುತ್ತಾ ಅಕ್ಕಪಕ್ಕದ ಮನೆಯವರನ್ನು ನಿಂದಿಸುತ್ತಿದ್ದರು. ಇದನ್ನು ವಿನಯ್ ಪ್ರಶ್ನಿಸಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ತಳ್ಳಾಟ, ನೂಕಾಟ ಸಂಭವಿಸಿದಾಗ ರಂಗಸ್ವಾಮಿ ಕೆಳಗೆ ಬಿದ್ದರು’ ಎಂದು ಪೊಲೀಸರು ತಿಳಿಸಿದರು.
ಕೆಳಗೆ ಬಿದ್ದ ಗಾಯಗೊಂಡಿದ್ದ ರಂಗಸ್ವಾಮಿ ತಲೆಗೆ ಗಂಭೀರ ಪೆಟ್ಟಾಗಿತ್ತು. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಆರೋಪಿಯನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.