ADVERTISEMENT

ಕೋಲ್ಕತ್ತದ ಮಹಿಳೆಗೆ ನಗರದಲ್ಲಿ ಸ್ವಯಂಚಾಲಿತ ಕಸಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 19:11 IST
Last Updated 20 ಜೂನ್ 2020, 19:11 IST

ಬೆಂಗಳೂರು: ಯಕೃತ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೋಲ್ಕತ್ತದ 46 ವರ್ಷದ ಮಹಿಳೆಗೆ ನಗರದ ಅಪೋಲೊ ಆಸ್ಪತ್ರೆಯಲ್ಲಿ ಸ್ವಯಂಚಾಲಿತ ಕಸಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ.

ಹೊಟ್ಟೆನೋವಿನಿಂದ ಬಳಲುತ್ತಿದ್ದ ಶ್ರೀಜಿತಾ ಅವರು ಕೋಲ್ಕತ್ತದಲ್ಲಿ ತಪಾಸಣೆ ಮಾಡಿಸಿಕೊಂಡಿದ್ದರು. ಈ ವೇಳೆ ಯಕೃತ್ತಿನಲ್ಲಿ ಗಡ್ಡೆ ಬೆಳೆದಿರುವುದು ದೃಢಪಟ್ಟಿತ್ತು. ಆದರೆ, ಯಕೃತ್ತಿಗೆ ಹಾನಿಯಾಗದಂತೆ ಅದನ್ನು ತೆಗೆಯಬೇಕಾಗಿದ್ದರಿಂದ ಅಲ್ಲಿನ ವೈದ್ಯರು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗುವಂತೆ ಶಿಫಾರಸು ಮಾಡಿದ್ದರು.

ಇಲ್ಲಿ ಡಾ. ಸಂಜಯ್ ಗೋವಿಲ್ ನೇತೃತ್ವದ ವೈದ್ಯರ ತಂಡ, ಎಂಟು ಗಂಟೆ ಸ್ವಯಂಚಾಲಿತ ಶಸ್ತ್ರಚಿಕಿತ್ಸೆ ನಡೆಸಿ, ಕ್ಯಾನ್ಸರ್ ಗಡ್ಡೆಯನ್ನು ಹೊರತೆಗೆದಿದ್ದಾರೆ. ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಮಹಿಳೆ ಜೂನ್‌ 15ರಂದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ADVERTISEMENT

‘ಗಡ್ಡೆ ಬೆಳೆದಿದ್ದ ಸ್ಥಳದಲ್ಲಿ ಸಣ್ಣ ಮತ್ತು ದೊಡ್ಡದಾದ ರಕ್ತನಾಳಗಳಿದ್ದವು. ಹಾಗಾಗಿ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಯನ್ನು ಕೈಬಿಟ್ಟು,ದಾನಿಗಳ ನೆರವಿಲ್ಲದೆಯೇ ಸ್ವಯಂಚಾಲಿತ ಶಸ್ತ್ರಚಿಕಿತ್ಸೆ ಕಸಿಯನ್ನು ಮಾಡಲು ನಿರ್ಧರಿಸಿದೆವು. ಕ್ಯಾನ್ಸರ್ ಗಡ್ಡೆಯನ್ನು ಹೊರತೆಗೆದು, ಆರೋಗ್ಯಯುತ ಯಕೃತ್ತನ್ನು ಕಸಿ ಮಾಡಿದ್ದೇವೆ. ಯಾವುದೇ ಹೆಚ್ಚುವರಿ ಚಿಕಿತ್ಸೆಯ ಅಗತ್ಯವಿಲ್ಲ’ ಎಂದು ಡಾ. ಸಂಜಯ್‌ ಗೋವಿಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.