ADVERTISEMENT

₹ 90 ಲಕ್ಷ ಕಳವು; ಆಂಧ್ರದಲ್ಲಿ ಸಿಕ್ಕಿಬಿದ್ದ ಬಾಂಗ್ಲಾ ಪ್ರಜೆಗಳು

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 22:31 IST
Last Updated 8 ಜೂನ್ 2021, 22:31 IST

ಬೆಂಗಳೂರು: ಬಾಗಲಗುಂಟೆ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ₹ 90 ಲಕ್ಷ ಕದ್ದುಕೊಂಡು ಪಶ್ಚಿಮ ಬಂಗಾಳಕ್ಕೆ ಕಾರಿನಲ್ಲಿ ಪರಾರಿಯಾಗುತ್ತಿದ್ದ ಬಾಂಗ್ಲಾ ಪ್ರಜೆಗಳಿಬ್ಬರು ಆಂಧ್ರಪ್ರದೇಶ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

‘ಬಾಂಗ್ಲಾದೇಶದ ಸಂಜು ಸಹಾ ಹಾಗೂ ಶುಭಂಕರ್ ಬಂಧಿತರು. ಇವರನ್ನು ಆಂಧ್ರಪ್ರದೇಶದ ಚಿತ್ತೂರು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಬಾಗಲಗುಂಟೆ ಠಾಣೆ ವ್ಯಾಪ್ತಿಯ ಮನೆಯಲ್ಲಿ ಕಳ್ಳತನ ಎಸಗಿದ್ದ ಪ್ರಕರಣದಲ್ಲಿ ಅವರನ್ನು ಕಸ್ಟಡಿಗೆ ಪಡೆದು ಮಹಜರು ಮಾಡಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಂದಿ ಆಯುವ ಕೆಲಸ: ‘ಪಶ್ಚಿಮ ಬಂಗಾಳದ ಮೂಲಕ ದೇಶದೊಳಗೆ ಅಕ್ರಮವಾಗಿ ನುಸುಳಿದ್ದ ಆರೋಪಿಗಳು, ಬೆಂಗಳೂರಿಗೆ ಬಂದು ಚಿಂದಿ ಆಯುವ ಕೆಲಸ ಆರಂಭಿಸಿದ್ದರು. ಚಿಂದಿ ಆಯುತ್ತ ನಗರದಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ಮನೆಗಳನ್ನು ಗುರುತಿಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಬಾಗಲಗುಂಟೆ ಠಾಣೆ ವ್ಯಾಪ್ತಿಯ ನಿವಾಸಿಯೊಬ್ಬರ ಮನೆಯಲ್ಲಿ ₹ 90 ಲಕ್ಷ ಕದ್ದಿದ್ದ ಆರೋಪಿಗಳು, ಹಣದ ಸಮೇತ ಬಾಂಗ್ಲಾದೇಶಕ್ಕೆ ವಾಪಸು ಹೋಗಲು ಮುಂದಾಗಿದ್ದರು.’

’ಕಾರು ಬಾಡಿಗೆ ಮಾಡಿಕೊಂಡು ಆರೋಪಿಗಳು ಪಶ್ಚಿಮ ಬಂಗಾಳಕ್ಕೆ ಹೊರಟಿದ್ದರು. ಆಂಧ್ರಪ್ರದೇಶ ಚಿತ್ತೂರು ಬಳಿ ಚೆಕ್‌ಪೋಸ್ಟ್‌ನಲ್ಲಿ ಕಾರು ತಡೆದಿದ್ದ ಪೊಲೀಸರು, ಪರಿಶೀಲನೆ ನಡೆಸಿದ್ದರು. ಆರೋಪಿಗಳ ಬಳಿ ₹ 90 ಲಕ್ಷ ಪತ್ತೆಯಾಗಿತ್ತು. ಅದಕ್ಕೆ ಯಾವುದೇ ದಾಖಲೆ ನೀಡಿರಲಿಲ್ಲ’ ಎಂದೂ ಮೂಲಗಳು ತಿಳಿಸಿವೆ.

‘ಕಾರು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದರು. ಬೆಂಗಳೂರಿನಲ್ಲಿ ಹಣ ಕದ್ದು ಪರಾರಿಯಾಗುತ್ತಿದ್ದ ಸಂಗತಿ ಬಾಯ್ಬಿಟ್ಟಿದ್ದರು. ಅದೇ ಮಾಹಿತಿ ಆಧರಿಸಿ ಆಂಧ್ರ ಪೊಲೀಸರು, ನಗರದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಾಗಲಗುಂಟೆ ಪೊಲೀಸರು, ಆರೋಪಿಗಳನ್ನು ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆದು ನಗರಕ್ಕೆ ಕರೆತಂದಿದ್ದರು. ಪ್ರಕರಣದ ಮಹಜರು ಮುಗಿಸಿ ಆರೋಪಿಗಳನ್ನು ಪುನಃ ಆಂಧ್ರ ಪೊಲೀಸರ ಸುಪರ್ದಿಗೆ ನೀಡಲಾಗಿದೆ’ ಎಂದೂ ಮೂಲಗಳು
ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.