
ಬೆಂಗಳೂರು: ರೌಡಿ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಸಿಐಡಿ ಪೊಲೀಸರ ಕಸ್ಟಡಿಯಲ್ಲಿರುವ ಐದನೇ ಆರೋಪಿ, ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ನ್ಯಾಯಾಲಯದ ಅನುಮತಿ ಪಡೆದು ಏಳು ದಿನ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಮೂರು ದಿನಗಳಿಂದ ಕೊಲೆ ಪ್ರಕರಣದ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರ ಪೈಕಿ ಕೆಲವು ಆರೋಪಿಗಳು ಹಾಗೂ ಶಾಸಕರು ಹೊರರಾಜ್ಯಕ್ಕೆ ತೆರಳಿ ಸುತ್ತಾಟ ನಡೆಸಿರುವ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಆ ಎಲ್ಲ ಫೋಟೊ, ವಿಡಿಯೊಗಳನ್ನು ಬೈರತಿ ಅವರ ಎದುರಿಗಿಟ್ಟು ಪ್ರಶ್ನೆ ಕೇಳಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
‘ಕೆಲವು ಪ್ರಶ್ನೆಗಳಿಗೆ ಅವರು ಸಮರ್ಪಕ ಉತ್ತರ ನೀಡುತ್ತಿಲ್ಲ. ‘ನನಗೆ ಗೊತ್ತಿಲ್ಲ. ಹೊರರಾಜ್ಯಕ್ಕೆ ತೆರಳಿದಾಗ ಹಾಗೂ ನನ್ನ ಕಚೇರಿಗೆ ಯಾರೊ ಬಂದು ನನ್ನ ಜತೆಗೆ ಫೋಟೊ ತೆಗೆಸಿಕೊಂಡಿರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊಗಳಿಗೂ, ನನಗೂ ಸಂಬಂಧ ಇಲ್ಲ. ಕೊಲೆಯಾದ ಬಿಕ್ಲು ಶಿವು ಅವರೂ ನನಗೆ ಪರಿಚಯ ಇರಲಿಲ್ಲ. ಜಮೀನಿಗೆ ವಿವಾದವೂ ನನಗೆ ಗೊತ್ತಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದಾರೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.
‘ಕೊಲೆ ಪ್ರಕರಣದಲ್ಲಿ ತಾಂತ್ರಿಕ ಸಾಕ್ಷ್ಯಾಧಾರ ಕಲೆ ಹಾಕಲಾಗಿದೆ. ಮೊದಲ ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ಹಾಗೂ ಬೈರತಿ ಬಸವರಾಜ ಅವರ ನಡುವೆ ದೂರವಾಣಿ ಮೂಲಕ ಸಂಭಾಷಣೆ ನಡೆದಿರುವುದಕ್ಕೆ ಪುರಾವೆಗಳು ಸಿಕ್ಕಿವೆ. ದೂರವಾಣಿ ಕರೆಗಳ ವಿವರವನ್ನು ಶಾಸಕರ ಎದುರು ತೋರಿಸಿ, ಪ್ರಶ್ನೆ ಕೇಳಿದಾಗ ತದ್ವಿರುದ್ಧವಾದ ಹೇಳಿಕೆ ನೀಡುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
2025ರ ಜುಲೈ 15ರಂದು ಬಿಕ್ಲು ಶಿವು ಅವರ ಕೊಲೆ ನಡೆದಿತ್ತು. ಶಿವು ಅವರ ತಾಯಿ ನೀಡಿದ ದೂರಿನ ಮೇರೆಗೆ ಭಾರತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ, ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.