ಬೆಂಗಳೂರು: ‘ಬಜರಂಗದಳದ ಹೆಸರು ಹೇಳಿಕೊಂಡು ಕೆಲವರು ನನಗೆ ಬೆದರಿಕೆ ಕರೆ ಮಾಡುತ್ತಿದ್ದಾರೆ. ಮೇ 18ರಂದು ಅಪರಿಚಿತರು ಮನೆಗೆ ನುಗ್ಗಿ ನನ್ನ ಸ್ನೇಹಿತೆ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ. ಹೀಗಾಗಿ, ನಮಗೆ ರಕ್ಷಣೆ ಬೇಕು’ ಎಂದು ತ್ರಿಪುರದ ಯುವತಿಯೊಬ್ಬರು ಹೆಬ್ಬಾಳ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಆರು ತಿಂಗಳ ಹಿಂದೆ ನಗರಕ್ಕೆ ಬಂದಿರುವ ಯುವತಿ, ಗೆಳತಿ ಜತೆ ಹೆಬ್ಬಾಳದಲ್ಲಿ ನೆಲೆಸಿದ್ದಾರೆ. ಅವರು ಕೊಟ್ಟಿರುವ ದೂರಿನ ಮೇರೆಗೆ ಪೊಲೀಸರು, ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಾವಳಿ ಆಧರಿಸಿ ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.
‘ಕೆಲ ದಿನಗಳ ಹಿಂದೆ ನನ್ನ ಮೊಬೈಲ್ಗೆ ಕರೆ ಮಾಡಿದ್ದ ಚಿಕ್ಕಪ್ಪ ಟಿನು ಘೋಷ್, ‘ನೀನು ಮುಸ್ಲಿಂ ಹುಡುಗನ ಜತೆ ಹೋಗಿದ್ದೀಯಾ. ಆತನನ್ನು ಬಿಟ್ಟು ಊರಿಗೆ ವಾಪಸ್ ಬರದಿದ್ದರೆ ನಿನ್ನ ತಾಯಿಯನ್ನು ಕೊಲೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದರು. ಅಲ್ಲದೇ, ನನ್ನ ಮೊಬೈಲ್ ಸಂಖ್ಯೆಯನ್ನು ಬೆಂಗಳೂರಿನಲ್ಲಿರುವ ಪರಿಚಿತರಿಗೂ ಕೊಟ್ಟಿದ್ದರು’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
‘ಈ ನಡುವೆ ಕೆಲವರು ಕರೆ ಮಾಡಿ ತಾವು ಭಜರಂಗದಳದವರು, ಹಿಂದೂ ಸಂಘಟನೆಯವರು ಎಂದು ಏರುಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಮೇ 18ರಂದು ಅಪರಿಚಿತರು ಮನೆಗೆ ನುಗ್ಗಿ ಸ್ನೇಹಿತೆ ಸಂಪಾ ಅಕ್ತರ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಮನೆಯಲ್ಲಿದ್ದ ಕೆಲವು ದಾಖಲೆಗಳನ್ನೂ ದೋಚಿಕೊಂಡು ಹೋಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.