ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಆನ್ಲೈನ್ ರಮ್ಮಿ, ಆನ್ಲೈನ್ ಜೂಜುಗಳನ್ನು ನಿಷೇಧಿಸಲು ಕೈಗೊಳ್ಳುವ ಕ್ರಮಗಳ ಬಗ್ಗೆ 15 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ.
ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆಯ ಅಧ್ಯಕ್ಷ ಬಿ.ಎಂ. ಶಿವಕುಮಾರ್ ಅವರು ಸಲ್ಲಿಸಿರುವ ದೂರನ್ನು ಪರಿಶೀಲಿಸಿ ಆಯೋಗದ ಅಧ್ಯಕ್ಷ ಟಿ. ಶ್ಯಾಂಭಟ್ ಅವರು ಆದೇಶ ಹೊರಡಿಸಿದ್ದಾರೆ.
‘ಆನ್ಲೈನ್ ರಮ್ಮಿ ಮತ್ತು ಆನ್ಲೈನ್ ಜೂಜುಗಳು ದೇಶದ ಜನರ ಬದುಕನ್ನೇ ನಾಶ ಮಾಡುತ್ತಿವೆ. ‘ದೇಶದ ಜನರೇ ನೀವೆಲ್ಲರೂ ಜೂಜಾಡಿ, ಜೂಜಾಡಿ’ ಎಂದು ಜಾಹೀರಾತುಗಳ ಮೂಲಕ ಪ್ರಚೋದನೆ ನೀಡಲಾಗುತ್ತಿದೆ. ಜನರು ಹಣ, ಆಸ್ತಿಗಳನ್ನು ಕಳೆದುಕೊಂಡು ಸಾಲ ಮಾಡಿ, ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಆನ್ಲೈನ್ ಜೂಜುಗಳನ್ನು ನಿಷೇಧಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಶಿವಕುಮಾರ್ ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ವಿಚಾರಣೆ ನಡೆಸಿ, 15 ದಿನಗಳಲ್ಲಿ ಆಯೋಗಕ್ಕೆ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದ್ದಾರೆ.
ಮಾರ್ಚ್ 21ರಂದು ನಡೆಯುವ ವಿಚಾರಣೆಯಲ್ಲಿ ವರದಿಯನ್ನು ಮಂಡಿಸಲೂ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.