
ಬಂಡೇಮಠದ ಶ್ರೀ ಬಂಡೇಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ರಾಜರಾಜೇಶ್ವರಿ ನಗರ: ಬಂಡೇಮಠದ ಶ್ರೀ ಬಂಡೇಶ್ವರಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ದೀಪೋತ್ಸವ, ತೆಪ್ಪೋತ್ಸವ ಸಂಭ್ರಮದಿಂದ ನಡೆಯಿತು.
ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ದೇವಸ್ಥಾನದ ಆವರಣದಲ್ಲಿ ವಿವಿಧ ರೀತಿಯ ಕಡಲೇಕಾಯಿ ಮಾರಾಟ ಜೋರಾಗಿತ್ತು.
ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ಸಾಗಿ ಬಂದು ದೇವರ ದರ್ಶನ ಪಡೆದರು. ಬೆಳಿಗ್ಗೆಯಿಂದಲೇ ಭಕ್ತಾಧಿಗಳಿಗೆ ಶ್ರೀಮಠದ ವತಿಯಿಂದ ಅನ್ನಪ್ರಸಾದವನ್ನು ಏರ್ಪಡಿಸಲಾಗಿತ್ತು.
ಕೋಟೆ ಯುವಕರ ಸಂಘ, ಜನಾಭಿಮಾನ ಮಹಿಳಾ ವೇದಿಕೆ, ದೇವಸ್ಥಾನದ ಭಕ್ತ ಮಂಡಳಿಯವರು ಭಾಗವಹಿಸಿ ಮುಂಜಾನೆಯಿಂದ ತಡರಾತ್ರಿಯವರೆಗೂ ಭಕ್ತಾದಿಗಳಿಗೆ ಅನ್ನಪ್ರಸಾದವನ್ನು ವಿತರಿಸಿದರು.
ಕೋಟೆ ಸೋಮೆಶ್ವರಸ್ವಾಮಿ ದೇವಸ್ಥಾನದಲ್ಲಿ ಸೋಮೇಶ್ವರಸ್ವಾಮಿಗೆ ರುದ್ರಾಭಿಷೇಕ ಸಹಿತ ವಿವಿಧ ಪೂಜಾ ಕೈಂಕರ್ಯ ನಡೆದವು.
ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಬಂಡೇಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ, ‘ಹಬ್ಬ ಹರಿದಿನಗಳು, ಕಾರ್ತಿಕಮಾಸ, ಶಿವರಾತ್ರಿಯಂದು ಸಾವಿರಾರು ಭಕ್ತರು ಬಂದು ಇಲ್ಲಿ ದೇವರ ದರ್ಶನ ಪಡೆಯುತ್ತಾರೆ. ಕಾರ್ತಿಕ ಮಾಸವು ಕತ್ತಲು, ಕಷ್ಟಗಳನ್ನು ತೊಲಗಿಸುವ ದೀಪಗಳ ರೂಪವೂ ಹೌದು’ ಎಂದರು.
ಶಾಸಕ ಎಸ್.ಟಿ.ಸೋಮಶೇಖರ್, ಕೆಆರ್ಐಡಿಎಲ್ ಮಾಜಿ ಅಧ್ಯಕ್ಷ ಎಂ. ರುದ್ರೇಶ್, ದೇವಸ್ಥಾನ ಟ್ರಸ್ಟಿ ಕೆ.ಎಸ್.ಜಗದೀಶ್, ಪಾಲಿಕೆ ಮಾಜಿ ಸದಸ್ಯರಾದ ಆಂಜನಪ್ಪ, ಶಾರದಾ ಮುನಿರಾಜು, ಸೂಲಿಕೆರೆ ಎಸ್.ಆರ್.ಮೋಹನ್, ಕಾಂಗ್ರೆಸ್ ಮುಖಂಡ ಆರ್.ಶಿವಮಾದಯ್ಯ ಬಿಜೆಪಿ ಮುಖಂಡ ಜೆ.ರಮೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.