ADVERTISEMENT

ಜನದನಿ | ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 23:54 IST
Last Updated 28 ಸೆಪ್ಟೆಂಬರ್ 2025, 23:54 IST
   

ಡಾಂಬರ್‌ ಹಾಕುವಾಗ ರಸ್ತೆಯಲ್ಲಿ ವಾಹನ ನಿಲ್ಲಿಸಿದ್ದರೆ ಅದನ್ನು ತೆರವುಗೊಳಿಸಿ, ಡಾಂಬರ್‌ ಹಾಕುವುದು ನಿಯಮ. ಆದರೆ, ಆರ್.ಟಿ. ನಗರದ ಪೊಲೀಸ್ ಠಾಣೆ ಸಮೀಪದ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಹಲವು ದಿನಗಳಿಂದ ವಾಹನ ನಿಲುಗಡೆ ಮಾಡಿದ್ದಾರೆ. ಇದರಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆ ಆಗುತ್ತಿದೆ. ಜೊತೆಗೆ ಇತ್ತೀಚೆಗೆ ಜಿಬಿಎ ಸಿಬ್ಬಂದಿ ಈ ರಸ್ತೆಗೆ ಡಾಂಬರ್‌ ಹಾಕುವ ಸಂದರ್ಭದಲ್ಲಿ ಈ ಕಾರನ್ನು ತೆರವುಗೊಳಿಸದೇ ಆ ಜಾಗವನ್ನು ಬಿಟ್ಟು ಡಾಂಬರ್‌ ಹಾಕಿರುವುದು ಎಷ್ಟು ಸರಿ? 

-ಸುರೇಶ್, ಆರ್.ಟಿ. ನಗರ

‘ರಸ್ತೆ ಗುಂಡಿ ಮುಚ್ಚಿ’

ADVERTISEMENT

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮಲ್ಲತ್ತಹಳ್ಳಿಯ ಮುಖ್ಯ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ಸಮಸ್ಯೆ ಆಗಿದೆ. ಈ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವ ಕಾರಣ ಸಂಚಾರ ದಟ್ಟಣೆ ಆಗುತ್ತಿದೆ. ಜೊತೆಗೆ ಅಪಘಾತಗಳು ಸಂಭವಿಸುತ್ತವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.

ಎಂ. ಲಿಂಗರಾಜುಗೌಡ, ಮಲ್ಲತಹಳ್ಳಿ 

‘ರಸ್ತೆಯಲ್ಲಿ ಕಸದ ರಾಶಿ’

ಜೆ.ಜೆ.ಆರ್‌. ನಗರದ ವಾರ್ಡ್‌ ಸಂಖ್ಯೆ 136ರ ಮುಖ್ಯ ರಸ್ತೆಯಲ್ಲಿ ಕಸದ ರಾಶಿ ಬಿದ್ದಿದ್ದು, ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ರಸ್ತೆಯಲ್ಲಿ ಕಸದ ರಾಶಿ ಬಿದ್ದಿರುವ ಕಾರಣ ವಾಹನ ಸಂಚಾರಕ್ಕೂ ಅಡೆತಡೆ ಆಗಿದೆ. ಬೀಡಾಡಿ ದನಗಳು ಹಾಗೂ ನಾಯಿಗಳು ರಸ್ತೆಯ ಮಧ್ಯ ಭಾಗಕ್ಕೆ ಕಸ ತಂದು ಎಸೆಯುತ್ತಿವೆ. ಆದ್ದರಿಂದ ಪಾಲಿಕೆ ಅಧಿಕಾರಿಗಳು ಕೂಡಲೇ ಇಲ್ಲಿ ಬಿದ್ದಿರುವ ಕಸದ ರಾಶಿಯನ್ನು ತೆರವುಗೊಳಿಸಿ, ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು.

-ಚಲಪತಿ, ಜೆ.ಜೆ.ಆರ್. ನಗರ 

‘ರಸ್ತೆಯಲ್ಲಿ ಹರಿಯುವ ತ್ಯಾಜ್ಯ ನೀರು’

ಬಳೆಪೇಟೆಯ ಮುಖ್ಯ ರಸ್ತೆಯಲ್ಲಿ  ಎರಡು ವಾರದಿಂದ ತ್ಯಾಜ್ಯ ನೀರು ಹರಿಯುತ್ತಿದೆ. ಇದು ಸ್ಥಳೀಯ ನಾಗರಿಕರಿಗೆ ಹಾಗೂ ವ್ಯಾಪಾರಿಗಳಿಗೆ ಸಮಸ್ಯೆ ಆಗಿದೆ. ಇದು ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮುಖ್ಯ ರಸ್ತೆಯಲ್ಲಿಯೇ ತ್ಯಾಜ್ಯ ನೀರು ಹರಿಯುವುದರಿಂದ ವಾಹನ ಸಂಚಾರಕ್ಕೂ ತೊಂದರೆ ಆಗಿದ್ದು, ಸಂಚಾರ ದಟ್ಟಣೆ ಆಗುತ್ತಿದೆ. ಇದನ್ನು ಸರಿಪಡಿಸುವಂತೆ ಬೆಂಗಳೂರು ಜಲಮಂಡಳಿ ಹಾಗೂ ಪಾಲಿಕೆಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ.

-ಶಿವಪ್ರಸಾದ್ ಎಸ್., ಬಳೆಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.