ನವದೆಹಲಿ: ಬ್ರಿಟಿಷ್ ಅಧಿಕಾರಿಗಳು 1868ರಲ್ಲಿ ಆರಂಭಿಸಿದ್ದ ‘ಬೆಂಗಳೂರು ಕ್ಲಬ್’, ಆಸ್ತಿ ತೆರಿಗೆ ಪಾವತಿಸುವ ಬಾಧ್ಯತೆ ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
‘ಈ ಕ್ಲಬ್ನ ಉದ್ದೇಶ ಸಾಮಾಜಿಕ ಸೌಹಾರ್ದ ಸ್ಥಾಪಿಸುವುದಾಗಿತ್ತೇ ವಿನಾ ವ್ಯಾಪಾರ ಅಥವಾ ಬೇರೆ ಯಾವುದೇ ವಾಣಿಜ್ಯ ಚಟುವಟಿಕೆಯ ಮೂಲಕ ಹಣ ಗಳಿಸುವುದಾಗಲಿ, ಲಾಭ ಮಾಡಿಕೊಳ್ಳುವುದಾಗಲಿ ಆಗಿರಲಿಲ್ಲ. ಆದ್ದರಿಂದ, ಆಸ್ತಿತೆರಿಗೆಯನ್ನು ಪಾವತಿಸಲು ಈ ಕ್ಲಬ್ ಬಾಧ್ಯತೆ ಹೊಂದಿಲ್ಲ ಎಂದು ನ್ಯಾಯಮೂರ್ತಿಗಳಾದ ಆರ್.ಎಫ್. ನರಿಮನ್, ನವೀನ್ ಸಿನ್ಹಾ ಹಾಗೂ ಇಂದಿರಾ ಬ್ಯಾನರ್ಜಿ ಅವರ ಪೀಠ ಹೇಳಿದೆ.
‘ಬೆಂಗಳೂರು ಕ್ಲಬ್ ಕೆಲವು ವ್ಯಕ್ತಿಗಳನ್ನು ಒಳಗೊಂಡ ಸಂಘಟನೆ, ಒಬ್ಬ ವ್ಯಕ್ತಿ ರೂಪಿಸಿದ್ದಲ್ಲ. ಷೇರುಗಳ ಬಗ್ಗೆ ಉಲ್ಲೇಖವಿಲ್ಲದೆಯೇ, ಸದಸ್ಯತ್ವವನ್ನು ನೀಡುವ ಹಲವು ಸಂಘಟನೆಗಳಲ್ಲಿ ಇದು ಕೂಡ ಒಂದಾಗಿದೆ. ವ್ಯಕ್ತಿ, ಹಿಂದೂ ಅವಿಭಜಿತ ಕುಟುಂಬ ಮತ್ತು ಕಂಪನಿಗಳು ಮಾತ್ರ ದೇಶದಲ್ಲಿ ಆಸ್ತಿತೆರಿಗೆಯ ವ್ಯಾಪ್ತಿಯೊಳಗೆ ಬರುತ್ತವೆ. ಬೆಂಗಳೂರು ಕ್ಲಬ್ ಈ ಮೂರೂ ವರ್ಗದಲ್ಲಿ ಬರುವುದಿಲ್ಲ. ಆದ್ದರಿಂದ ಆಸ್ತಿತೆರಿಗೆಯ ವ್ಯಾಪ್ತಿಯೊಳಗೆ ತರಲು ಸಾಧ್ಯವಿಲ್ಲ’ ಎಂದು ಕೋರ್ಟ್ ಹೇಳಿದೆ. ಆ ಮೂಲಕ ಕರ್ನಾಟಕ ಹೈಕೋರ್ಟ್ 2007ರ ಜನವರಿ 23ರಂದು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
ಒಬ್ಬ ವ್ಯಕ್ತಿಗೆ ಸೇರಿದ ಸಂಸ್ಥೆ ಎಂಬ ಕಾರಣಕ್ಕೆ ಈ ಕ್ಲಬ್ ಆಸ್ತಿತೆರಿಗೆ ಕಾಯ್ದೆಯ ಸೆಕ್ಷನ್ 21ಎಎ ಅಡಿ ಆಸ್ತಿತೆರಿಗೆ ಪಾವತಿಸಲು ಬದ್ಧವಾಗಿರುತ್ತದೆ ಎಂಬ ತೆರಿಗೆ ಇಲಾಖೆಯ ವಾದವನ್ನು ಕೋರ್ಟ್ ತಳ್ಳಿಹಾಕಿದೆ.
ಚರ್ಚಿಲ್ ಸಹ ಸುಸ್ತಿದಾರ:ಡಬ್ಲ್ಯು.ಎಲ್.ಎಸ್. ಚರ್ಚಿಲ್ ಎಂಬ ವ್ಯಕ್ತಿಯೊಬ್ಬರು ಬೆಂಗಳೂರು ಕ್ಲಬ್ಗೆ 13 ರೂಪಾಯಿ ಬಾಕಿ ಇರಿಸಿಕೊಂಡಿದ್ದರು. 1899ರಲ್ಲಿ ಅವರ ಹೆಸರನ್ನು ಕ್ಲಬ್ನ ಸುಸ್ತಿದಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು.
ಸುಸ್ತಿದಾರರಿಗೆ ಸಂಬಂಧಿಸಿದ ಆ ಬಾಕಿ ಈವರೆಗೆ ಪಾವತಿಯಾಗಿಲ್ಲ. ಸುಸ್ತಿದಾರ ಚರ್ಚಿಲ್, ಆನಂತರದ ದಿನ
ಗಳಲ್ಲಿ ‘ಸರ್’ ಚರ್ಚಿಲ್ ಎನಿಸಿಕೊಂಡರು, ಬ್ರಿಟನ್ನ ಪ್ರಧಾನಿಯೂ ಆದರು’ ಎಂಬುದನ್ನು ಕೋರ್ಟ್ ಉಲ್ಲೇಖಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.