ADVERTISEMENT

’ಬರಹಗಾರ ಎಂದರೆ ಅಂತರಂಗದಲ್ಲಿ ಹೋರಾಟಗಾರ’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 21:26 IST
Last Updated 18 ಡಿಸೆಂಬರ್ 2021, 21:26 IST

ಬೆಂಗಳೂರು: ‘ಬರಹಗಾರ ಎಂದರೆ ಅಂತರಂಗದಲ್ಲಿ ಅವನೊಬ್ಬ ಹೋರಾಟಗಾರ. ಆದೇ ರೀತಿ ನಾನು ಸಹ ಬರಹದ ಮೂಲಕ ಜನ ಸಾಮಾನ್ಯರ ಧ್ವನಿಯಾಗಿರುತ್ತೇನೆ’ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗೋವಾದ ಕೊಂಕಣಿ ಸಾಹಿತಿ ದಾಮೋದರ್ ಮಾಜೋ ತಿಳಿಸಿದರು.

‘ಕೊಂಕಣಿ; ಒಂದು ಭಾಷೆ ಹಲವು ಲಿಪಿ’ ಎಂಬ ಗೋಷ್ಠಿಯಲ್ಲಿ ವರ್ಚುವಲ್ ಮೂಲಕ ಪಾಲ್ಗೊಂಡು ಮಾತನಾಡಿದ ಅವರು, ‘ಸಾಮಾನ್ಯ ಜನರು ಸಹ ಪ್ರಭುತ್ವದ ತಪ್ಪುಗಳ ವಿರುದ್ಧ ದನಿ ಎತ್ತಬೇಕು’ ಎಂದರು.

‘ಜ್ಞಾನಪೀಠ ಪ್ರಶಸ್ತಿ ದೊರೆತಾಗ ಮುಖ್ಯಮಂತ್ರಿಯೇ ನನ್ನ ಮನೆಗೆ ಬಂದು ಅಭಿನಂದಿಸಿದ್ದರು. ಅಷ್ಟು ಮಾತ್ರಕ್ಕೆ ಸರ್ಕಾರದ ತಪ್ಪುಗಳ ವಿರುದ್ಧ ಮಾತನಾಡದಿರಲು ಆಗುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಕೊಂಕಣಿಯನ್ನು ಗೋವಾ ಸರ್ಕಾರ ತನ್ನ ರಾಜ್ಯದ ಅಧಿಕೃತ ಭಾಷೆ ಎಂದು 1996–97ರಲ್ಲಿ ಘೋಷಿಸಿದೆ. ಗೋವಾ, ಕೇರಳ, ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಪದಗಳ ಅರ್ಥದಲ್ಲಿ ವ್ಯತ್ಯಾಸವಿದೆ. ಭಾಷಿಕರು ಯಾವುದೇ ರಾಜ್ಯದಲ್ಲಿ ಇದ್ದರೂ, ಸಂಸ್ಕೃತಿ ಒಂದೇ ಆಗಿದೆ. ಕನ್ನಡ, ಪೋರ್ಚುಗೀಸ್ ಮತ್ತು ಇತರ ಭಾಷೆಗಳ ಪದಗಳನ್ನೂ ಕೊಂಕಣಿಯಲ್ಲಿ ಬಳಸಲಾಗುತ್ತಿದೆ’ ಎಂದರು.

‘ಬೇರೆ ಬೇರೆ ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದೇನೆ. ಆದರೆ, ಕೊಂಕಣಿಯೇ ನನ್ನ ಅಚ್ಚುಮೆಚ್ಚಿನ ಭಾಷೆ ಎಂಬುದರಲ್ಲಿ ಎರಡು ಮಾತಿಲ್ಲ. ಮಾತೃ ಭಾಷೆಯಲ್ಲಿ ಮಾತ್ರ ನಮ್ಮ ಭಾವನೆಗಳನ್ನು ಪರಿಪೂರ್ಣವಾಗಿ ವ್ಯಕ್ತಪಡಿಸಲು ಸಾಧ್ಯ’ ಎಂದು ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.