ADVERTISEMENT

ಕಾನೂನು ಬಾಹಿರ ವೇತನ: ಆರೋಪ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 16:40 IST
Last Updated 2 ಸೆಪ್ಟೆಂಬರ್ 2021, 16:40 IST

ಬೆಂಗಳೂರು: ಕೆಲ ಸಿಬ್ಬಂದಿಗೆ ಕಾನೂನುಬಾಹಿರವಾಗಿ ವೇತನ ರಕ್ಷಣೆ ನೀಡುವ ಮೂಲಕ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಅಕ್ರಮ ಎಸಗಿದೆ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರ ಗುಂಪು ಆರೋಪಿಸಿದೆ.

‘ಕುಲಪತಿ ‌ಕೆ.ಆರ್‌. ವೇಣುಗೋಪಾಲ್ ಅವರು ವಿಶ್ವವಿದ್ಯಾಲಯಗಳ ಕಾಯ್ದೆ ಉಲ್ಲಂಘಿಸಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಕೆಲ ಸಿಬ್ಬಂದಿಗೆ ವೇತನ ರಕ್ಷಣೆ ನೀಡಿದ್ದಾರೆ’ ಎಂದು ಸಿಂಡಿಕೇಟ್ ಸದಸ್ಯ ಡಾ. ಸುಧಾಕರ್ ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ವೇತನ ರಕ್ಷಣೆ ಹೆಸರಿನಲ್ಲಿ ಆರು ಪ್ರಾಧ್ಯಾಪಕರಿಗೆ ₹2 ಕೋಟಿಗೂ ಹೆಚ್ಚು ವೇತನ ಪಾವತಿಸಲಾಗಿದೆ. ಪ್ರತಿ ತಿಂಗಳು ಲಕ್ಷಗಟ್ಟಲೆ ಹಣ ಪ್ರಾಧ್ಯಾಪಕರಿಗೆ ವೇತನ ರೂಪದಲ್ಲಿ ಸಂದಾಯವಾಗುತ್ತಿದೆ. ಉನ್ನತ ಶಿಕ್ಷಣ ಇಲಾಖೆ ಮತ್ತು ರಾಜ್ಯಪಾಲರು ತಕ್ಷಣ ಕಾರ್ಯಪ್ರವೃತ್ತರಾಗಿ ವೇತನ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

ಯುಜಿಸಿ ನಿಯಮ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ನಿಯಂತ್ರಣ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿ ಯುವಿಸಿಇ ಪ್ರಾಧ್ಯಾಪಕರ ಜೇಷ್ಠತಾ ಪಟ್ಟಿಯನ್ನು ವಿಶ್ವವಿದ್ಯಾಲಯ ಹೊರಡಿಸಿದೆ ಎಂದು ಮತ್ತೊಬ್ಬ ಸಿಂಡಿಕೇಟ್ ಸದಸ್ಯ ಉದಯಕುಮಾರ್ ಆರೋಪಿಸಿದರು.

‘ವಿಶ್ವವಿದ್ಯಾನಿಲಯದ ಪಿಎಚ್‌.ಡಿ ನಿಯಮಗಳು 2016 ಅನ್ನು ಉಲ್ಲಂಘಿಸಿ ಅನರ್ಹ ಅಭ್ಯರ್ಥಿಗಳನ್ನು ಪಿಎಚ್‌.ಡಿಗೆ ಸೇರಿಸಲಾಗಿದೆ. ಅತಿಥಿ ಉಪನ್ಯಾಸಕರ ನೇಮಕಾತಿ, ಖಾಲಿ ಇದ್ದ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಸೇರಿ ವಿಶ್ವವಿದ್ಯಾಲಯದ ಎಲ್ಲ ಅಕ್ರಮಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಮತ್ತೊಬ್ಬ ಸದಸ್ಯ ಡಾ. ಗೋವಿಂದರಾಜು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.