ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 55ನೇ ಘಟಿಕೋತ್ಸವವು ಜ.30ರಂದು ನಡೆಯಲಿದ್ದು, 56,172 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಈ ಪೈಕಿ, 196 ವಿದ್ಯಾರ್ಥಿಗಳು 319 ಚಿನ್ನದ ಪದಕಗಳನ್ನು ಪಡೆಯಲು ಯಶಸ್ವಿಯಾಗಿದ್ದಾರೆ.
ಯುವಿಸಿಇ ಕಾಲೇಜಿನ ಬಿಇ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಎ.ಎಸ್. ಕಶ್ಯಪ್ ವಾಸುದೇವನ್ 9 ಚಿನ್ನದ ಪದಕ, ಬೆಂಗಳೂರು ವಿಶ್ವವಿದ್ಯಾಲಯ ರಸಾಯನ ವಿಜ್ಞಾನ ವಿಭಾಗದ ಕೆ.ಎಸ್. ನರೇಶ್ ಹಾಗೂ ಫ್ರೇಜರ್ ಟೌನ್ನ ಬಿಬಿಎಂಪಿ ಪ್ರಥಮದರ್ಜೆ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ರಹಮತುನ್ನೀಸಾ ತಲಾ 8 ಚಿನ್ನದ ಪದಕ ಪಡೆದಿದ್ದಾರೆ.
ಯುವಿಸಿಇಯ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಕೆ.ಎಸ್. ಮೇಘನಾಥನ್ ಮತ್ತು ಚಿಕ್ಕಬಳ್ಳಾಪುರ ಬಿಜಿಎಸ್ ಸೈನ್ಸ್ ಅಕಾಡೆಮಿಯ ಪ್ರಾಣಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅರತಿ ರೇ, ಬೆಂಗಳೂರು ವಿಶ್ವ ವಿದ್ಯಾಲಯದ ಸಂಸ್ಕೃತ ವಿಭಾಗದ ಟಿ.ಎಸ್. ಚರಣ್ ರಾಜ್, ಮಹದೇವ ಪದವಿಪೂರ್ವ ಕಾಲೇಜಿನ ಬಿಎ ವಿದ್ಯಾರ್ಥಿನಿ ಎಂ.ಆರ್. ಮಹಾಲಕ್ಷ್ಮಿ ತಲಾ ಚಿನ್ನದ ಪದಕ ಪಡೆದಿದ್ದಾರೆ.
ವಿಜಯಪುರದ ಪ್ರಗತಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ಎಂ.ರುಕ್ಸಾನಾ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಎ.ಸುಶ್ಮಿತಾ ತಲಾ ನಾಲ್ಕು ಚಿನ್ನದ ಪದಕ, ಮಿರಂಡಾ ಬಿ.ಇಡಿ ಪದವಿ ವಿದ್ಯಾರ್ಥಿನಿ ಸ್ಫೂರ್ತಿ ಗೋಪಾಲ ಕೊಂಡ್ಲಿ ಮೂರು ಚಿನ್ನದ ಪದಕ ಪಡೆದಿದ್ದಾರೆ.
ವಿ.ವಿ.ಎಸ್. ಮಹಿಳಾ ಪದವಿ ಕಾಲೇಜಿನ ಮಹತಿ ಭಟ್, ಕೆ.ಆರ್.ವೃತ್ತದಲ್ಲಿರುವ ಯುವಿಸಿಇಯ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿ ಬಿ.ಪಿ.ಚಿನ್ಮಯಿ ಕೂಡ ತಲಾ ಎರಡು ಬಂಗಾರದ ಪದಕ ಪಡೆದಿದ್ದಾರೆ ಎಂದು ವಿಶ್ವವಿದ್ಯಾಲಯ ಹೇಳಿದೆ.
ಸೆಂಟ್ರಲ್ ಕಾಲೇಜು ಆವರಣದ ಜ್ಞಾನಭಾರತಿ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ 11.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ರಾಜ್ಯಪಾಲ ವಜುಭಾಯಿ ವಾಲಾ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಭಾರತೀಯ ಬಾಹ್ಯಾಕಾಶ ಕೇಂದ್ರದ ಅಧ್ಯಕ್ಷ ಡಾ.ಕೆ.ಶಿವನ್ ಹಾಗೂ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.