ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಮುಖ್ಯ ಪ್ರವೇಶ ದ್ವಾರದಲ್ಲಿ ಮೊದಲಿನಂತೆಯೇ ಡಾ.ಎಚ್. ನರಸಿಂಹಯ್ಯ ಅವರ ಹೆಸರಿರುವ ನಾಮಫಲಕವನ್ನು ಇತ್ತೀಚೆಗೆ ಅಳವಡಿಸಲಾಗಿದೆ.
ಇದೇ ವರ್ಷದ ಜುಲೈ 20ರಂದು ನಡೆದಿದ್ದ ಸಿಂಡಿಕೇಟ್ ವಿಶೇಷ ಸಭೆಯಲ್ಲಿ ಸದಸ್ಯರಾದ ಡಾ.ಎಚ್. ಸುಧಾಕರ್ ಈ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದರು.
ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣವನ್ನು ನಿರ್ಮಿಸಲು ಕಾರಣಕರ್ತರಾದ ಡಾ.ಎಚ್. ನರಸಿಂಹಯ್ಯ ಅವರ ಹೆಸರನ್ನೊಳಗೊಂಡ ನಾಮಫಲಕವನ್ನು ತೆರವುಗೊಳಿಸಿ ವಿಶ್ವವಿದ್ಯಾಲಯದ ದ್ವಾರದಲ್ಲಿ ಬೇರೆ ನಾಮಫಲಕವನ್ನು ಸಿಂಡಿಕೇಟ್ ಗಮನಕ್ಕೆ ತಾರದೇ ಅಳ ವಡಿಸಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ದೀರ್ಘ ಚರ್ಚೆಯ ನಂತರ ಜ್ಞಾನಭಾರತಿ ದ್ವಾರದಲ್ಲಿ ಅಳವಡಿಸಿರುವ ಹೊಸ ನಾಮಫಲಕ ತೆರವುಗೊಳಿಸಲು ಹಾಗೂ ಮೊದಲಿನಂತೆಯೇ ನರಸಿಂಹಯ್ಯ ಅವರ ಹೆಸರನ್ನು ಒಳಗೊಂಡ ನಾಮಫಲಕವನ್ನು ಮಾತ್ರ ಅಲ್ಲಿ ಅಳವಡಿಸಬೇಕು ಎಂದು ಸಿಂಡಿಕೇಟ್ ನಿರ್ಣಯ ಕೈಗೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.