ADVERTISEMENT

ಮಾಹಿತಿ ಹಕ್ಕು ಪ್ರಜಾಪ್ರಭುತ್ವದ ಬ್ರಹ್ಮಾಸ್ತ್ರ

ಮಾಹಿತಿ ಆಯೋಗದ ಅಧ್ಯಕ್ಷ ಎನ್.ಸಿ.ಶ್ರೀನಿವಾಸ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 18:46 IST
Last Updated 13 ಜುಲೈ 2020, 18:46 IST

ಬೆಂಗಳೂರು: 'ಸರ್ಕಾರಗಳ ನೀತಿ ಹಾಗೂ ಯೋಜನೆಗಳನ್ನು ನಾಗರಿಕರು ಮಾಹಿತಿ ಹಕ್ಕಿನ ಮೂಲಕ ತಿಳಿದುಕೊಳ್ಳಬೇಕಿದೆ. ಪುರಾಣಗಳಲ್ಲಿ ಬ್ರಹ್ಮಾಸ್ತ್ರ ದೊಡ್ಡ ಅಸ್ತ್ರವಾದರೆ, ಪ್ರಜಾಪ್ರಭುತ್ವದಲ್ಲಿ ಮಾಹಿತಿ ಹಕ್ಕು ದೊಡ್ಡ ಬ್ರಹ್ಮಾಸ್ತ್ರ' ಎಂದು ರಾಜ್ಯ ಮಾಹಿತಿ ಆಯೋಗದ ಅಧ್ಯಕ್ಷ ಎನ್.ಸಿ.ಶ್ರೀನಿವಾಸ್ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಎನ್‍ಎಸ್‍ಎಸ್ ಘಟಕ ಹಾಗೂ ಶಾಂತಿನಿಕೇತನ ಕಾಲೇಜಿನ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 'ಕೋವಿಡ್-19ರ ಸಂದರ್ಭದಲ್ಲಿ ಮಾಹಿತಿ ಹಕ್ಕಿನ ಪ್ರಾಮುಖ್ಯತೆ' ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

'ಮಾಹಿತಿ ಹಕ್ಕು ಕಾಯ್ದೆಯು 15 ವರ್ಷಗಳನ್ನು ಪೂರೈಸಿದೆ. ಪ್ರಜಾಪ್ರಭುತ್ವ ಆಶಯ ಹಾಗೂ ಮೌಲ್ಯಗಳನ್ನು ಎತ್ತಿ ಹಿಡಿಯಲು ಇದು ಬಹಳ ಅವಶ್ಯವಾದ ಕಾನೂನು. ಪ್ರಪಂಚದ ಅತ್ಯುತ್ತಮ ಮಾಹಿತಿ ಕಾಯ್ದೆಗಳಲ್ಲಿ ಭಾರತ ಮೂರನೇ ಸ್ಥಾನ ಪಡೆದುಕೊಂಡಿದೆ' ಎಂದರು.

ADVERTISEMENT

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್‌, 'ಪಾರದರ್ಶಕತೆ, ಮುಕ್ತತೆ ಹಾಗೂ ಹೊಣೆಗಾರಿಕೆ ಮಾಹಿತಿ ಹಕ್ಕು ಕಾಯ್ದೆಯ ತ್ರಿಮೂರ್ತಿಗಳು. ಸರ್ಕಾರ ಸವಲತ್ತುಗಳನ್ನು ತಿಳಿಯಲು ಮಾಹಿತಿ ಹಕ್ಕು ಬಹಳ ಅನುಕೂಲಕರ' ಎಂದು ತಿಳಿಸಿದರು.

ಬೆಂಗಳೂರು ವಿವಿಯ ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಎನ್.ಸತೀಶ್ ಗೌಡ,' ಮಾಹಿತಿ ಹಕ್ಕು ಕಾಯ್ದೆ ದೇಶದ ಎರಡನೇ ಸಂವಿಧಾನ. ಒಂದು ವೇಳೆ ಸರ್ಕಾರದ ಸವಲತ್ತುಗಳು ಸಾರ್ವಜನಿಕರಿಗೆ ತಲುಪದಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಈ ಕಾಯ್ದೆ ಮಾಡುತ್ತದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.