ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಕಚೇರಿಯಲ್ಲಿ ಗೌತಮ ಬುದ್ಧ ಹಾಗೂ ಸರಸ್ವತಿ ಪ್ರತಿಮೆಗಳನ್ನು ಸ್ಥಾಪಿಸುವ ವಿಚಾರದಲ್ಲಿ ಉಂಟಾದ ವಿವಾದದ ಕುರಿತು ಕುಲಪತಿ ಕೆ.ಆರ್.ವೇಣುಗೋಪಾಲ್ ಅವರು ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ದಾರೆ.
‘ಈ ವಿವಾದಕ್ಕೆ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ.ಸಿ.ಮೈಲಾರಪ್ಪ ಹಾಗೂ ಗ್ರಾಮೀಣ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಟಿ.ಎಸ್.ಮೂರ್ತಿ ಅವರು ಹೊಣೆಗಾರರು’ ಎಂಬ ಅಂಶ ವರದಿಯಲ್ಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಅಕ್ಕಪಕ್ಕದಲ್ಲೇ ಸರಸ್ವತಿ, ಬುದ್ಧನ ಪ್ರತಿಮೆ
ಬುದ್ಧ ಹಾಗೂ ಸರಸ್ವತಿ ಪ್ರತಿಮೆಗಳನ್ನು ಅಕ್ಕಪಕ್ಕದಲ್ಲಿ ಕೂರಿಸುವ ನಿರ್ಣಯ ತಳೆದು ವಿವಾದವನ್ನು ಸದ್ಯ ತಣ್ಣಗಾಗಿಸಲಾಗಿದೆ. ಈ ಕುರಿತು ಸಂಪೂರ್ಣ ವರದಿಯನ್ನು ಕುಲಪತಿ ಅವರು ‘ಉನ್ನತ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಸಚಿವ, ರಾಜ್ಯಪಾಲರು ಹಾಗೂ ಪೊಲೀಸ್ ಕಮಿಷನರ್ ಅವರಿಗೆ ಕಳುಹಿಸಿಕೊಟ್ಟಿದ್ದಾರೆ’ ಎಂಬ ಮಾತು ಕೇಳಿ ಬರುತ್ತಿದೆ.
ಪ್ರತಿಮೆ ಸ್ಥಾಪಿಸುವಾಗ ಈ ಎರಡು ವಿಭಾಗಗಳ ಮುಖ್ಯಸ್ಥರು ವಿದ್ಯಾರ್ಥಿಗಳೊಂದಿಗೆ ಇದ್ದದ್ದು ಸಿ.ಸಿ ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್.ಅನಿಲ್ ಕುಮಾರ್, ‘ವರದಿ ತಲುಪಿದೆ. ವಿದ್ಯಾರ್ಥಿಗಳನ್ನು ಪ್ರಚೋದಿಸಿದವರ ವಿರುದ್ಧ ಕ್ರಮ ಜರುಗಿಸಲು ಕುಲಪತಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.
ಬಿ.ಸಿ.ಮೈಲಾರಪ್ಪ, ‘ಈ ವಿವಾದದಲ್ಲಿ ನನ್ನ ಪಾತ್ರ ಇಲ್ಲ. ಸೋಮವಾರ ಬೆಳಿಗ್ಗೆ ಅಹಮದಾಬಾದ್ನಿಂದ ಬಂದ ನಂತರ ವಿಭಾಗಕ್ಕೆ ಹೋದೆ. ನನಗೆ ಪ್ರತಿಮೆ ಸ್ಥಾಪಿಸುತ್ತಿರುವ ಮಾಹಿತಿಯೂ ಇರಲಿಲ್ಲ. ವಿದ್ಯಾರ್ಥಿಗಳು ಕರೆದರೆಂದು ಪ್ರಾಧ್ಯಾಪಕ ಸಂಘದ ಪ್ರತಿನಿಧಿಯಾಗಿ ಭಾಗವಹಿಸಿದ್ದೆ ಅಷ್ಟೆ. ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಕ್ರಮ ಜರುಗಿಸುವುದು ಸರಿಯಲ್ಲ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.