ಕೆ.ಆರ್.ಪುರ: ಕೆಲವೇ ದಿನಗಳ ಹಿಂದೆ ಅಭಿವೃದ್ಧಿಗೊಂಡ ಬಸವನಪುರ ಕೆರೆಯ ನೀರು ಸೋರಿಕೆಯಾಗುತ್ತಿದ್ದು, ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.
ನಾಲ್ಕು ವರ್ಷಗಳಿಂದ ಕಾಮಗಾರಿ ನಡೆದು ಈ ವರ್ಷ ಪೂರ್ಣಗೊಂಡು ಎರಡು ವಾರಗಳಿಂದ ಸುರಿಯುತ್ತಿರುವ ಮಳೆಗೆ ಕೆರೆ ತುಂಬಿದ್ದರಿಂದ ಗ್ರಾಮಸ್ಥರು ಸಂತಸಗೊಂಡಿದ್ದರು. ಬಾಗಿನ ಅರ್ಪಿಸಲು ಸಿದ್ಧತೆ ಮಾಡಿಕೊಂಡಿದ್ದರು. ಕಳಪೆ ಕಾಮಗಾರಿಯಿಂದಾಗಿ ಅಪಾರ ಪ್ರಮಾಣದ ನೀರು ಸೋರಿಕೆಯಾಗಿದೆ.
ಕೆರೆಯ ಉತ್ತರ ದಿಕ್ಕಿನಲ್ಲಿ ಲಕ್ಷಾಂತರ ಲೀಟರ್ ಹರಿದು ಹೋಗಿದೆ. ನಾಲ್ಕು ಅಡಿಯಷ್ಟು ನೀರು ಖಾಲಿಯಾಗಿದೆ. ತಗ್ಗು ಪ್ರದೇಶದ ಜಮೀನುಗಳಿಗೆ ಪೋಲಾಗುತ್ತಿದ್ದರೂ ಅಧಿಕಾರಿಗಳು ನೀರು ಸೋರಿಕೆ ತಡೆಗಟ್ಟಲು ವಿಫಲವಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
‘ಜವಾಬ್ದಾರಿಯಿಂದ ಕಾಮಗಾರಿ ಮಾಡಿದರೆ ನೀರು ಪೋಲಾಗುವುದು ತಡೆಗಟ್ಟಬಹುದಾಗಿತ್ತು. ಕೆರೆ ಅಭಿವೃದ್ಧಿ ಕೈಗೆತ್ತಿಕೊಳ್ಳುವ ಮುಂಚೆ ಪೈಪ್ ಲೈನ್ ಅಳವಡಿಸಿ ನೀರುಹೊರಹಾಕುವ ಕೆಲಸ ಮಾಡಲಾಗಿತ್ತು. ನೀರು ಹೊರಹಾಕಿದ ನಂತರ ಹಳೆಯ ಪೈಪ್ ಲೈನ್ ಹಾಗೆ ಬಿಟ್ಟಿರುವುದರಿಂದ ಈಗ ಕೆರೆ ತುಂಬಿ ಒತ್ತಡ ಹೆಚ್ಚಿ ಮಣ್ಣು ಸವೆದು ಅಪಾರ ಪ್ರಮಾಣದಲ್ಲಿ ನೀರು ಸೋರಿಕೆ ಆಗಿದೆ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರು ಒತ್ತಾಯಿಸಿದರು.
‘ಬೆಂಗಳೂರಿನಲ್ಲಿರುವ ಕೆರೆಗಳು ರಾಜಕಾಲುವೆ ಸಂಪರ್ಕ ಹೊಂದಿರುತ್ತವೆ. ಆದರೆ, ರಾಜಕಾಲುವೆ ಸಂಪರ್ಕ ಇಲ್ಲದೆ ಬಸವನಪುರ ಕೆರೆ ನೇರವಾಗಿ ಮಳೆ ನೀರು ಸೇರುತ್ತಿತ್ತು. ಕೆರೆ ತುಂಬಿ ಸಾರ್ವಜನಿಕರಿಗೆ ಸಂತೋಷವಾಗಿತ್ತು. ಇನ್ನೂ ಈ ರೀತಿ ಜಲಕಾಯ ತುಂಬಲು ಎಷ್ಟು ದಿನ ಕಾಯಬೇಕೋ’ ಎಂದು ಕೆರೆ ಹೋರಾಟಗಾರ ಬಾಲಾಜಿ ರಘೋತ್ತಮ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.