ADVERTISEMENT

ಬೆಂಗಳೂರು: ಬಸವೇಶ್ವರ ಮೂರ್ತಿ ಅನಾವರಣ

ಬಸವತತ್ವ ಪಾಲನೆಯಿಂದ ಸುಂದರ ಸಮಾಜ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 16:16 IST
Last Updated 6 ಸೆಪ್ಟೆಂಬರ್ 2025, 16:16 IST
<div class="paragraphs"><p>ರಾಜಾಜಿನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಜಂಕ್ಷನ್‌ನಲ್ಲಿ ಜಗಜ್ಯೋತಿ ಬಸವೇಶ್ವರ ಮೂರ್ತಿಯನ್ನು ಶನಿವಾರ ಅನಾವರಣಗೊಳಿಸಲಾಯಿತು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ, ಎಸ್. ಸುರೇಶ್ ಕುಮಾರ್, ಬಿ.ಎಸ್. ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಗೋಪಾಲಯ್ಯ, ಸಿ. ಸೋಮಶೇಖರ್ ಉಪಸ್ಥಿತರಿದ್ದರು. </p></div>

ರಾಜಾಜಿನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಜಂಕ್ಷನ್‌ನಲ್ಲಿ ಜಗಜ್ಯೋತಿ ಬಸವೇಶ್ವರ ಮೂರ್ತಿಯನ್ನು ಶನಿವಾರ ಅನಾವರಣಗೊಳಿಸಲಾಯಿತು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ, ಎಸ್. ಸುರೇಶ್ ಕುಮಾರ್, ಬಿ.ಎಸ್. ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಗೋಪಾಲಯ್ಯ, ಸಿ. ಸೋಮಶೇಖರ್ ಉಪಸ್ಥಿತರಿದ್ದರು.

   

ಪ್ರಜಾವಾಣಿ ಚಿತ್ರ 

ಬೆಂಗಳೂರು: ಬಸವಣ್ಣನ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಕಾಯಕ, ದಾಸೋಹ, ಸಹೋದರತ್ವ, ಸಹಬಾಳ್ವೆ ಪಾಲನೆಯಿಂದ ಸುಂದರ ಸಮಾಜದ ನಿರ್ಮಾಣ ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅಭಿಪ್ರಾಯಪಟ್ಟರು.

ADVERTISEMENT

ಬಸವ ಪುತ್ಥಳಿ ಪ್ರತಿಷ್ಠಾಪನಾ ಸಮಿತಿ ರಾಜಾಜಿನಗರದ ವೆಸ್ಟ್‌ ಆಫ್ ಕಾರ್ಡ್‌ ರೋಡ್‌ ಜಂಕ್ಷನ್ ಬಳಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಗಜ್ಯೋತಿ ಬಸವೇಶ್ವರ ಮೂರ್ತಿ ಅನಾವರಣ ಸಮಾರಂಭದಲ್ಲಿ ಮಾತನಾಡಿದರು.

‘ಅಸಮಾನತೆ, ಕಂದಾಚಾರ, ಅಸ್ಪೃಶ್ಯತೆ, ಮೌಢ್ಯತೆ ಇದ್ದ 850 ವರ್ಷಗಳ ಹಿಂದೆ ಬಸವಣ್ಣ ಅವರು ಶ್ರೇಣಿರಹಿತ ಸಮ ಸಮಾಜದ ಕನಸು ಕಂಡಿದ್ದರು. ಮಹಿಳೆಯರಿಗೂ ಸಮಾನ ಸ್ಥಾನಮಾನ ನೀಡಬೇಕೆಂದು ಪ್ರತಿಪಾದಿಸಿದ್ದರು. ಸಮ ಸಮಾಜದ ಅವರ ಕನಸನ್ನು ನನಸಾಗಿಸಬೇಕು’ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, 'ಬಸವಣ್ಣ ಅವರನ್ನು ಒಂದೇ ಸಮಾಜಕ್ಕೆ ಸೀಮಿತ ಮಾಡಬಾರದು. ಸರ್ವ ಸಮುದಾಯದ ನಾಯಕ. ಜ್ಞಾನಿಗಳು, ವಿಜ್ಞಾನಿಗಳು, ಚಿಂತಕರು, ಸಾಹಿತಿಗಳು ಪುಟಗಟ್ಟಲೆ ಹೇಳುವುದನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ನಾಲ್ಕೈದು ಸಾಲಿನಲ್ಲಿ ತಿಳಿಸಿದ ಮಹಾನ್ ನಾಯಕ ಬಸವಣ್ಣ’ ಎಂದರು.

‘ಬೂದಿ ವಿಭೂತಿಯಾಗುತ್ತದೆ, ಅಕ್ಕಿ ಅಕ್ಷತೆಯಾಗುತ್ತದೆ, ಕೊಬ್ಬರಿ ಪ್ರಸಾದವಾಗುತ್ತದೆ, ಅನ್ನ ನೈವೇದ್ಯವಾಗುತ್ತದೆ. ಅದೇ ರೀತಿ ರಾಜಕಾರಣಿ ಕೊಟ್ಟ ಮಾತು ನೆರವೇರಿಸಿದರೆ ಬದುಕು ಸಾರ್ಥಕ. ಜೊತೆಗೆ ಜನರು ಆತನನ್ನು ಮರೆಯುವುದಿಲ್ಲ. ಕೆಂಪೇಗೌಡರು ಎಲ್ಲಾ ವರ್ಗಗಳಿಗೆ ಬೆಂಗಳೂರು ಕಟ್ಟಿದಂತೆ ಬಸವಣ್ಣ ಅವರು ಎಲ್ಲಾ ವರ್ಗಗಳ ಏಳಿಗೆಗೆ ಸಂದೇಶ ನೀಡಿದರು’ ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ಬಸವೇಶ್ವರ ನಗರದಲ್ಲಿ ಬಸವೇಶ್ವರ ಮೂರ್ತಿ ಸ್ಥಾಪನೆ ಆಗಿರುವುದು ಅರ್ಥಪೂರ್ಣವಾಗಿದೆ. ಬಸವಣ್ಣನ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯುಡಿಯೂರಪ್ಪ ಮಾತನಾಡಿ, ಶತ, ಶತಮಾನಗಳಿಂದ ಜ್ಞಾನದ ಬೆಳಕು ಚಲ್ಲಿದ ಕಾಯಕಯೋಗಿ ಬಸವಣ್ಣ, ಕಾಯಕದ ಮಹತ್ವವನ್ನು ವಿಶ್ವಕ್ಕೆ ಸಾರಿದರು. ಸಮಾಜಕ್ಕೆ ನಿರಂತರ ಸ್ಪೂರ್ತಿಯಾಗಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯ, ಸಮ ಸಮಾಜದ ನಿರ್ಮಾಣ ಮಾಡಿದರು. ಯುವ ಪೀಳಿಗೆಗೆ ಬಸವೇಶ್ವರ ಸಿದ್ದಾಂತಗಳು ದಾರಿದೀಪವಾಗಲಿ ಎಂದು ಹೇಳಿದರು.

ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಕೂಡಲಸಂಗಮದ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕ ಎಸ್.ಸುರೇಶ್ ಕುಮಾರ್ ಹಾಜರಿದ್ದರು.

ಸಮಿತಿ ಅಧ್ಯಕ್ಷ ಸಿ.ಸೋಮಶೇಖರ್ ಅವರ ‘ಮಾತೆಂಬುದು ಜ್ಯೋತಿರ್ಲಿಂಗ’ ಕೃತಿಯನ್ನು ಶಾಸಕ ಗೋಪಾಲಯ್ಯ ಬಿಡುಗಡೆ ಮಾಡಿದರು. ಮಾಜಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ, ಶಿಲ್ಪಿ ಜಗದೀಶ್ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಪ್ರಧಾನ ಸಂಚಾಲಕ ಎಚ್‌.ಆರ್.ಮಲ್ಲಿಕಾರ್ಜುನಯ್ಯ ಹಾಜರಿದ್ದರು.

ಮುಂದಿನ ವರ್ಷ ಅನುಭವ ಮಂಟಪ

‘ಬಸವಕಲ್ಯಾಣದಲ್ಲಿ ₹750 ಕೋಟಿ ವೆಚ್ಚದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣವಾಗುತ್ತಿದ್ದು ಇಲ್ಲಿ 770 ಅಮರಗಣಂಗಳ ವಚನಗಳನ್ನು ಕೆತ್ತಲಾಗಿದೆ. ಮುಂದಿನ ವರ್ಷದೊಳಗೆ ಅದನ್ನು ಪೂರ್ಣಗೊಳಿಸಲಾಗುವುದು’ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.