
ಬೆಂಗಳೂರು: ಅಥಣಿಯ ಮುರುಘೇಂದ್ರ ಶಿವಯೋಗಿಗಳ ಜಯಂತ್ಯುತ್ಸವವನ್ನು ನವೆಂಬರ್ 14ರಿಂದ 16ರವರೆಗೆ ವಿಜಯನಗರದ ಹಂಪಿನಗರ ಕ್ರೀಡಾಂಗಣದ ಚಂದ್ರಶೇಖರ ಅಜಾದ್ ವೇದಿಕೆಯಲ್ಲಿ ಆಯೋಜಿಸಲಾಗಿದೆ ಎಂದು ಗಚ್ಚಿನಮಠ ಶಿವಬಸವ ಸ್ವಾಮೀಜಿ ತಿಳಿಸಿದರು.
‘ಅಥಣಿ ಸ್ವಾಮೀಜಿ ಬೇರೆಯಲ್ಲ, ಬಸವಣ್ಣ ಬೇರೆಯಲ್ಲ. ಬಸವಣ್ಣನ ವಚನಗಳನ್ನು ಪ್ರಚಾರ ಮಾಡಿದ ಅಥಣಿ ಶ್ರೀ ಅವರ ಚಿಂತನೆಗಳನ್ನು ನಗರದ ಜನರಿಗೆ ಪರಿಚಯಿಸಬೇಕಂಬ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಹೇಳಿದರು.
ಬಸವೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ಸಮುದಾಯಗಳ ಸ್ವಾಮೀಜಿಗಳು, ರಾಜಕೀಯ ನಾಯಕರು ಭಾಗವಹಿಸುವರು. ಬಸವಣ್ಣ ಮತ್ತು ಅಥಣಿ ಸ್ವಾಮೀಜಿ ಅವರ ಕುರಿತು ಚರ್ಚೆ, ಗೋಷ್ಠಿ ನಡೆಯಲಿದೆ. ಇತರೆ ಯಾವುದೇ ವಿಷಯ ಚರ್ಚೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿನಿತ್ಯ ಸಂಪನ್ಮೂಲ ವ್ಯಕ್ತಿಗಳು ಯುವಕರಿಗೆ ಸ್ಫೂರ್ತಿದಾಯಕ ಹಿತನುಡಿ ಹೇಳುವರು. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಮಾದಾರ ಚೆನ್ನಯ್ಯ ಗುರು ಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಬ್ಯಾಡಗಿ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಹೊಳಲ್ಕೆರೆ ಒಂಟಿಕಂಬದ ಮಠದ ತಿಪ್ಪರುದ್ರ ಸ್ವಾಮೀಜಿ, ಅನ್ನಪೂರ್ಣೆಶ್ವರಿ ಮಠದ ಬಸವಲಿಂಗ ಸ್ವಾಮೀಜಿ, ಡಿಎಕ್ಸ್ ಮ್ಯಾಕ್ಸ್ ಸಂಸ್ಥೆಯ ಮುಖ್ಯಸ್ಥ ದಯಾನಂದ್, ರಾಷ್ಟ್ರೀಯ ಬಸವ ತತ್ವ ಪರಿಷತ್ ಅಧ್ಯಕ್ಷ ಅರುಣ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.