ADVERTISEMENT

ಬಿಬಿಎಂಪಿ ಆಡಳಿತಾಧಿಕಾರಿ ರಾತ್ರಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 22:10 IST
Last Updated 25 ಸೆಪ್ಟೆಂಬರ್ 2020, 22:10 IST
ಕೆಂಪೇಗೌಡ ರಸ್ತೆಯಲ್ಲಿ ಸ್ವಚ್ಛತೆ ಪರಿಶೀಲನೆ ನಡೆಸಿದ ಗೌರವ ಗುಪ್ತ. ಪಾಲಿಕೆ ಅಧಿಕಾರಿಗಳು ಜತೆಯಲ್ಲಿದ್ದರು
ಕೆಂಪೇಗೌಡ ರಸ್ತೆಯಲ್ಲಿ ಸ್ವಚ್ಛತೆ ಪರಿಶೀಲನೆ ನಡೆಸಿದ ಗೌರವ ಗುಪ್ತ. ಪಾಲಿಕೆ ಅಧಿಕಾರಿಗಳು ಜತೆಯಲ್ಲಿದ್ದರು   

ಬೆಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ಕಸಗುಡಿಸುವ ಯಂತ್ರಗಳ ಕಾರ್ಯ ಚಟುವಟಿಕೆಯನ್ನು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಅವರು ಗುರುವಾರ ರಾತ್ರಿ 11ರಿಂದ 1 ಗಂಟೆ ತನಕ ಪರಿಶೀಲನೆ ನಡೆಸಿದರು.

ಮೊದಲಿಗೆ ಕೆಂಪೇಗೌಡ ರಸ್ತೆಯ ಇಂದಿರಾ ಕ್ಯಾಂಟೀನ್ (ಬನ್ನಪ್ಪ ಉದ್ಯಾನ) ಬಳಿ ರಸ್ತೆ, ಶಿವಾನಂದ ವೃತ್ತದಿಂದ ಕುಮಾರಕೃಪ ರಸ್ತೆ, ಎಂ.ಜಿ.ರಸ್ತೆಗಳಲ್ಲಿ ಕಸ ಗುಡಿಸುವ ಯಂತ್ರದ ಕಾರ್ಯವೈಖರಿ ಪರಿಶೀಲಿಸಿ, ‘ಎಲ್ಲಿಯೂ ಕಸ ಉಳಿಯದಂತೆ ನೋಡಿಕೊಳ್ಳಬೇಕು. ರಸ್ತೆ ವಿಭಜಕಗಳ ಮೇಲೆ ಕಸ ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು’ ಎಂದು ಸೂಚನೆ ನೀಡಿದರು.

ನಂತರ ಸೆಂಟ್ರಲ್ ಕಾಲೇಜು ವೃತ್ತದಿಂದ ಅರಮನೆ ರಸ್ತೆ ಮಾರ್ಗದಲ್ಲಿ ನಡೆಯುತ್ತಿರುವ ಟೆಂಡರ್‌ಶ್ಯೂರ್ ಕಾಮಗಾರಿ ತಪಾಸಣೆ ನಡೆಸಿದರು. ‘ವಾಹನ ಸಾವರರಿಗೆ ಅನುಕೂಲವಾಗುವಂತೆ ರಸ್ತೆ ದುರಸ್ತಿ ಕಾಮಗಾರಿ ನಡೆಸಬೇಕು. ಕಾಮಗಾರಿ ನಡೆಯುವ ಸ್ಥಳದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು. ಪಾದಚಾರಿ ಮಾರ್ಗಗಳಲ್ಲಿ ಇರುವ ಕಸದ ಡಬ್ಬಗಳನ್ನು ತೆರವುಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

‘ಪಾದಚಾರಿ ಮಾರ್ಗದಲ್ಲಿ ಒಎಫ್‌ಸಿ, ವಿದ್ಯುತ್ ತಂತಿ ಅಳವಡಿಸಲು ನಿರ್ಮಿಸುತ್ತಿರುವ ಗುಂಡಿಗಳ ಮೇಲೆ ಕೂಡಲೇ ಸ್ಲ್ಯಾಬ್‌ಗಳನ್ನು ಅಳವಡಿಸಬೇಕು’ ಎಂದು ತಿಳಿಸಿದರು.

ಅಸಾಯಿ ರಸ್ತೆ ಬದಿಯಲ್ಲಿ ಜಲಮಂಡಳಿಯಿಂದ ಕಾಮಗಾರಿ ನಿರ್ವಹಿಸಿದ್ದ ಸಂದರ್ಭದಲ್ಲಿ ಹಾಕಲಾಗಿದ್ದ ಮಣ್ಣಿನ ರಾಶಿ ತೆರವುಗೊಳಿಸಿರಲಿಲ್ಲ. ಜಲ ಮಂಡಳಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಗುಪ್ತ, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡುವಂತೆ ಸೂಚನೆ ನೀಡಿದರು.

ಬಾಣಸವಾಡಿ ಮುಖ್ಯ ರಸ್ತೆ ಹಾಗೂ ಮೇಲ್ಸೇತುವೆಯನ್ನೂ ಇದೇ ವೇಳೆ ತಪಾಸಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.