ಬೆಂಗಳೂರು: ರಾಗಿಗುಡ್ಡ ಕೊಳೆಗೇರಿ ಪ್ರದೇಶದಲ್ಲಿ ಮಂಡಳಿ ವತಿಯಿಂದ ನಿರ್ಮಿಸಿರುವ ಮನೆಗಳ ಮಧ್ಯಗೋಡೆಯನ್ನು ಒಡೆದು ಹಾಕಿ ಅನಧಿಕೃತ ಪ್ರವೇಶ ಮಾಡಿದ್ದ ಆರೋಪಿಗೆ ಸಿ.ಎಂ.ಎಂ ನ್ಯಾಯಾಲಯ ₹10 ಸಾವಿರ ದಂಡ ವಿಧಿಸಿದೆ.
ಬಿಬಿಎಂಪಿ ವಾರ್ಡ್ ನಂ.177 ರಾಗಿಗುಡ್ಡ ಕೊಳೆಗೇರಿ ಪ್ರದೇಶದಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ನರ್ಮ್, ಬಿ.ಎಸ್.ಯು.ಪಿ ಯೋಜನೆ ಅಡಿಯಲ್ಲಿ ನಿವೇಶನಗಳನ್ನು ನಿರ್ಮಿಸಲಾಗಿತ್ತು. ಈ ವಸತಿ ಸಂಕೀರ್ಣದ ಬ್ಲಾಕ್ ನಂ.1 ರಲ್ಲಿ 1ನೇ ಮಹಡಿಯ ಸಂಖ್ಯೆ 11 ಅನ್ನು ವೆಂಕಟೇಶ್ ಅವರಿಗೆ ಹಂಚಿಕೆ ಮಾಡಲಾಗಿತ್ತು. ಈ ನಿವೇಶನಕ್ಕೆ ಹೊಂದಿಕೊಂಡಂತಿದ್ದ ನಂ.15 ಮನೆ ಖಾಲಿ ಇತ್ತು. ಮಂಡಳಿಯಿಂದ ಅನುಮತಿ ಪಡೆಯದೆ ಎರಡು ಮನೆಗಳ ನಡುವಿನ ಗೋಡೆಯನ್ನು ತೆರವುಗೊಳಿಸಿ ಆರ್ಥಿಕ ನಷ್ಟ ಉಂಟುಮಾಡಿದ್ದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಎಂಟಿಎಫ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದಾಖಲೆಗಳ ಸಹಿತ ಪೊಲೀಸರು ಸಿ.ಎಂ.ಎಂ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಆರೋಪ ಸಾಬೀತಾ ಗಿದ್ದು, ವೆಂಕಟೇಶ್ಗೆ ನ್ಯಾಯಾಲಯ ₹10 ಸಾವಿರ ದಂಡ, ತಪ್ಪಿದ್ದಲ್ಲಿ 75 ದಿನ ಜೈಲು ಶಿಕ್ಷೆ ವಿಧಿಸಲು ಮಾ.4ರಂದು ಆದೇಶಿಸಿದೆ ಎಂದು ಬಿಎಂಟಿಎಫ್ ಡಿವೈ ಎಸ್ಪಿ ಶ್ರೀಧರ ಕೆ. ಪೂಜಾರ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.