ADVERTISEMENT

ಬೆಂಗಳೂರು | ಅನಧಿಕೃತ ಪ್ರಾಣಿವಧೆ ನಿಷೇಧ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 21:50 IST
Last Updated 27 ಜುಲೈ 2020, 21:50 IST

ಬೆಂಗಳೂರು: ಬಕ್ರೀದ್, ಜಾತ್ರೆ, ಹಬ್ಬ ಹರಿದಿನಗಳಲ್ಲಿ ಹಾಗೂ ಇತರ ಧಾರ್ಮಿಕ ಚಟುವಟಿಕೆ ಸಂದರ್ಭದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪ್ರಾಣಿವಧೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಆದೇಶ ಮಾಡಿದ್ದಾರೆ.

ರಸ್ತೆಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ, ಆಸ್ಪತ್ರೆ, ನರ್ಸಿಂಗ್ ಹೋಮ್‌, ಶಾಲೆ, ಕಾಲೇಜುಗಳ ಒಳ ಮತ್ತು ಹೊರ ಆವರಣಗಳಲ್ಲಿ, ಆಟದ ಮೈದಾನಗಳಲ್ಲಿ, ದೇವಸ್ಥಾನ, ಮಸೀದಿಗಳ ಹಾಗೂ ಇತರೆ ಧಾರ್ಮಿಕ ಸ್ಥಳಗಳ ಪ್ರಾಂಗಣಗಳಲ್ಲಿ, ಉದ್ಯಾನಗಳಲ್ಲಿ ಹಾಗೂ ಇತರ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಾಣಿವಧೆ ನಿಷೇಧಿಸಲಾಗಿದೆ.

ಈ ನಿಯಮ ಉಲ್ಲಂಘಿಸಿದವರಿಗೆ 1959ರ ಕರ್ನಾಟಕ ರಾಜ್ಯ ಪ್ರಾಣಿವಧಾ ನಿಯಂತ್ರಣ ಕಾಯ್ದೆ ಹಾಗೂ ತಿದ್ದುಪಡಿ ಕಾಯ್ದೆ 1975ರ ಪ್ರಕಾರ 6 ತಿಂಗಳ ಸಜೆ ಅಥವಾ ₹ 1 ಸಾವಿರ ದಂಡ ಅಥವಾ ಎರಡನ್ನೂ ವಿಧಿಸಬಹುದು. ಈ ಕಾಯ್ದೆಯ ಪ್ರಕಾರ ವಧೆಗೆ ಅರ್ಹವಾದ, ಆಹಾರಕ್ಕೆ ಯೋಗ್ಯವಾದ ಪ್ರಾಣಿಗಳನ್ನು ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧಿಸಲು ಅವಕಾಶವಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ವಾಯುವಿಹಾರದ ವೇಳೆ ವ್ಯಕ್ತಿ ಸಾವು

ಬೆಂಗಳೂರು: ಆರ್‌.ಟಿ.ನಗರದಲ್ಲಿ ಸೋಮವಾರ ವಾಯುವಿಹಾರ ಮಾಡುತ್ತಿದ್ದ ವೇಳೆಯಲ್ಲೇ ವ್ಯಕ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

‘ಉದ್ಯಾನಕ್ಕೆ ಬಂದಿದ್ದ ವ್ಯಕ್ತಿ ವಾಯುವಿಹಾರ ಮಾಡಿದ್ದರು. ಕೆಲ ಗಂಟೆಗಳ ನಂತರ ಉದ್ಯಾನ ಬಳಿಯೇ ರಸ್ತೆ ಮೇಲೆ ಬಿದ್ದಿದ್ದರೆಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ’ ಎಂದು ಆರ್‌.ಟಿ.ನಗರ ಠಾಣೆಯ ಪೊಲೀಸರು ಹೇಳಿದರು.

‘ವಿಷಯ ಗೊತ್ತಾಗುತ್ತಿದ್ದಂತೆಯೇ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಹತ್ತಿರ ಹೋಗಿ ನೋಡಿದಾಗ ಅವರು ಮೃತಪಟ್ಟಿದ್ದು ಗೊತ್ತಾಯಿತು. ಸ್ಥಳೀಯರ ಸಹಾಯದಿಂದ ವ್ಯಕ್ತಿಯ ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಗಂಟಲಿನ ದ್ರವ ಸಂಗ್ರಹಿಸಿರುವ ವೈದ್ಯರು, ಕೊರೊನಾ ಪರೀಕ್ಷೆಗಾಗಿ ಕಳುಹಿಸಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.