ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು(ಬಿಬಿಎಂಪಿ) ಐದು ಪಾಲಿಕೆಗಳಾಗಿ ವಿಭಜಿಸಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಲು ಬಿಜೆಪಿ ತೀರ್ಮಾನಿಸಿದೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ನೇತೃತ್ವದಲ್ಲಿ ಶನಿವಾರ ನಡೆದ ಬೆಂಗಳೂರು ವ್ಯಾಪ್ತಿಯ ಬಿಜೆಪಿ ಶಾಸಕರ ಸಭೆ, ರಾಜ್ಯ ಸರ್ಕಾರದ ನಿರ್ಧಾರವನ್ನು ಕೋರ್ಟ್ನಲ್ಲಿ ಪ್ರಶ್ನಿಸುವ ನಿರ್ಣಯ ತೆಗೆದುಕೊಂಡಿದೆ.
ಸಭೆಯ ನಂತರ ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಆರ್. ಅಶೋಕ, ‘ಕಾಂಗ್ರೆಸ್ ನೇತೃತ್ವದ ಸರ್ಕಾರ ತನಗೆ ಬೇಕಾದಂತೆ ಬೆಂಗಳೂರನ್ನು ಐದು ಭಾಗ ಮಾಡಲು ಹೊರಟಿದೆ. ಇದರಿಂದ ಐದು ಪಾಲಿಕೆಗಳ ನಡುವೆ ತಾರತಮ್ಯ, ಸಂಘರ್ಷ ಸೃಷ್ಟಿಯಾಗಲಿದೆ. ಸರ್ಕಾರದ ನಡೆ ವಿರುದ್ಧ ಕಾನೂನು ಹೋರಾಟದ ಜತೆಗೆ ಪ್ರತಿಭಟನೆಯನ್ನೂ ನಡೆಸಲಾಗುವುದು’ ಎಂದರು.
‘ಬೆಂಗಳೂರು ವಿಭಜನೆ ಮಾಡಬೇಕು ಎಂದು ಯಾರೂ ಕೇಳಿಲ್ಲ. ಈಗಾಗಲೇ ನಗರದಲ್ಲಿ ತೆರಿಗೆ, ಸೆಸ್, ಇ–ಖಾತಾ ಸಮಸ್ಯೆಗೆ ಜನರು ಹೈರಾಣಾಗಿದ್ದಾರೆ. ಇಂತಹ ಸಮಯದಲ್ಲಿ ಬಿಬಿಎಂಪಿ ಚುನಾವಣೆ ನಡೆದರೆ ಕಾಂಗ್ರೆಸ್ಗೆ ಸೋಲು ಖಚಿತ. ಸೋಲಿನ ಮುಖಭಂಗ ತಪ್ಪಿಸಿ, ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ರಾಜಕೀಯ ತಂತ್ರಗಾರಿಕೆ ಭಾಗವಾಗಿ ಗ್ರೇಟರ್ ಬೆಂಗಳೂರು ಸೂತ್ರ ಹೆಣೆಯಲಾಗಿದೆ’ ಎಂದು ದೂರಿದರು.
‘ಕಪ್ಪು ಪಟ್ಟಿಯಲ್ಲಿರುವ ಗುತ್ತಿಗೆದಾರರಿಗೆ ಸುರಂಗ ರಸ್ತೆ ನಿರ್ಮಾಣದ ಹೊಣೆಗಾರಿಕೆ ನೀಡಲಾಗುತ್ತಿದೆ. ಸುರಂಗ ರಸ್ತೆಗೆ ಟೋಲ್ ಶುಲ್ಕ ನಿಗದಿ ಮಾಡುವುದರಿಂದ ಶ್ರೀಮಂತರು ಮಾತ್ರ ಬಳಸಬಹುದು. ಜನಸಾಮಾನ್ಯರಿಗೆ ಪ್ರಯೋಜನವಿಲ್ಲ. ಇದು ಹಣ ಕೊಳ್ಳೆ ಹೊಡೆಯುವ ಯೋಜನೆ. ಹೆಬ್ಬಾಳ ಮೇಲ್ಸೇತುವೆ ಬಳಿಯ ಜಂಕ್ಷನ್ ಜಾಗವನ್ನು ಖಾಸಗಿ ಭೂ ಮಾಲೀಕರಿಗೆ ನೀಡಲು ಸರ್ಕಾರ ಮುಂದಾಗಿದೆ. ಈ ಕುರಿತು ಸದನದಲ್ಲಿ ಚರ್ಚಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.