ADVERTISEMENT

ಬೆಂಗಳೂರು: ವಾರ್ಡ್‌ನಲ್ಲಿ ಒಂದೇ ಕಡೆ ಸಾರ್ವಜನಿಕ ಗಣೇಶೋತ್ಸವ

4 ಅಡಿ ಎತ್ತರದ ಮೂರ್ತಿಗೆ ಮಾತ್ರ ಅವಕಾಶ l ರಾಸಾಯನಿಕ ಬಣ್ಣ, ಥರ್ಮಕೋಲ್‌, ಪಿಒಪಿ ಬಳಕೆ ನಿಷೇಧ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 21:47 IST
Last Updated 19 ಆಗಸ್ಟ್ 2020, 21:47 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಬೆಂಗಳೂರು: ನಗರದಲ್ಲಿ ಕೋವಿಡ್‌ ವ್ಯಾಪಕವಾಗಿರುವುದರಿಂದ ಈ ಬಾರಿ ವಾರ್ಡ್‌ನಲ್ಲಿ ಒಂದು ಕಡೆ ಮಾತ್ರ ಸಾರ್ವಜನಿಕ ಗಣೇಶೋತ್ಸವ ನಡೆಸಲು ಬಿಬಿಎಂಪಿ ಅನುಮತಿ ನೀಡಲಿದೆ. ಪೂಜೆಗೆ 4 ಅಡಿಗಿಂತ ಎತ್ತರದ ಮೂರ್ತಿಯನ್ನು ಬಳಸುವುದಕ್ಕೆ ಅವಕಾಶ ಇಲ್ಲ.

ರಾಸಾಯನಿಕ ಬಣ್ಣ, ಥರ್ಮಕೋಲ್‌, ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸುವ ಗೌರಿ ಗಣೇಶ ವಿಗ್ರಹಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಈ ಕುರಿತು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್‌ ಸುತ್ತೋಲೆ ಹೊರಡಿಸಿದ್ದಾರೆ. ವಾರ್ಡ್‌ನಲ್ಲಿ ಗರಿಷ್ಠ 3 ದಿನಗಳವರೆಗೆ ಮಾತ್ರ ಸಾರ್ವಜನಿಕ ಗಣೇಶ ಉತ್ಸವ ಆಚರಿಸಬಹುದು. ಯಾವುದೇ ರೀತಿಯ ಮನರಂಜನಾ ಕಾರ್ಯಕ್ರಮ ಏರ್ಪಡಿಸಲು ಅವಕಾಶ ಇಲ್ಲ. ಗಣೇಶ ಮೂರ್ತಿಯನ್ನು ಅನುಮತಿ ನೀಡುವಾಗ ನಿಗದಿಪಡಿಸಿದ ರೀತಿಯಲ್ಲೇ ವಿಸರ್ಜನೆ ಮಾಡಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಗಣೇಶ ಉತ್ಸವವನ್ನು ಆಚರಿಸಲು ಆಸಕ್ತಿಯುಳ್ಳ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿ, ವಾರ್ಡ್‌ನಲ್ಲಿ ಒಂದು ಸಂಸ್ಥೆಗೆ ಮಾತ್ರ ಅವಕಾಶ ನೀಡಬೇಕು. ಆಯಾ ವಲಯದ ಬಿಬಿಎಂಪಿ ಜಂಟಿ ಆಯುಕ್ತರು ಮತ್ತು ಡಿಸಿಪಿ ಸೇರಿ ಸ್ಥಳ ನಿಗದಿ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಕಂದಾಯ ಇಲಾಖೆ, ಪೊಲೀಸ್‌ ಮತ್ತು ಅಗ್ನಿಶಾಮಕ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ, ಈ ಮೂರು ಇಲಾಖೆಗಳಿಂದ ಪಡೆಯಬೇಕಾದ ಅನುಮತಿಯನ್ನು ಈ ಸಮಿತಿ ಮೂಲಕವೇ ಒಟ್ಟಿಗೆ ನೀಡಬೇಕು. 4 ಅಡಿಗಿಂತ ಕಡಿಮೆ ಎತ್ತರವಿರುವ ಮಣ್ಣಿನ ಮೂರ್ತಿಯನ್ನೇ ಪೂಜೆಗೆ ಬಳಸಬೇಕು ಎಂದು ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

‘ನಗರದಲ್ಲಿ ಕೋವಿಡ್‌ ವ್ಯಾಪಕ ವಾಗಿರುವುದರಿಂದ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಷರತ್ತು ಬದ್ಧ ಅನುಮತಿ ನೀಡಲಿದ್ದೇವೆ. ವಾರ್ಡ್‌
ನಲ್ಲಿ ಒಂದು ಕಡೆ ಮಾತ್ರ ಸಾರ್ವಜನಿಕ ಗಣೇಶೋತ್ಸವ ಆಚರಿಸುವುದಕ್ಕೆ ಅವಕಾಶ ನೀಡಲಾಗುತ್ತದೆ. ಪೂಜೆಗೊಳ್ಳುವ ಗಣೇಶ ವಿಗ್ರಹಗಳನ್ನು ಎಲ್ಲಿ ವಿಸರ್ಜನೆ ಮಾಡಬೇಕು ಎಂಬುದನ್ನು ಅನುಮತಿ ನೀಡುವಾಗಲೇ ತಿಳಿಸುತ್ತೇವೆ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಉತ್ಸವದಲ್ಲೂ 20ಕ್ಕಿಂತ ಹೆಚ್ಚು ಜನ ಒಟ್ಟು ಸೇರುವಂತಿಲ್ಲ. ದೇವರ ದರ್ಶನದ ವೇಳೆಯೂ ಪರಸ್ಪರ 2 ಮೀಟರ್‌ ಅಂತರ ಕಾಯ್ದುಕೊಳ್ಳಬೇಕು. ಸ್ಥಳವನ್ನು ಪ್ರತಿದಿನ ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛಗೊಳಿಸಬೇಕು’ ಎಂದರು.

ಮಣ್ಣಿನ ಮೂರ್ತಿಗಳಿಗೆ ಮಾತ್ರ ಮನ್ನಣೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶೋತ್ಸವ ಸಲುವಾಗಿ ರಾಸಾಯನಿಕ ಬಣ್ಣ, ಥರ್ಮಕೋಲ್‌ ಅಥವಾ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ಗಣೇಶ ಮೂರ್ತಿಗಳನ್ನು ತಯಾರಿಸುವುದನ್ನು ಹಾಗೂ ಇಂತಹ ಪದಾರ್ಥ ಬಳಸಿ ತಯಾರಿಸಿದ ಮೂರ್ತಿಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ ಪ್ರತಿವರ್ಷವೂ ಈ ನಿಯಮ ಉಲ್ಲಂಘನೆ ಆಗುತ್ತಿತ್ತು. ಇಂತಹ ಮೂರ್ತಿಗಳನ್ನು ತಯಾರಿಸುವುದು ಹಾಗೂ ಮಾರಾಟ ಮಾಡುವುದು ನಿಂತಿರಲಿಲ್ಲ. ಆದರೆ, ಈ ವರ್ಷ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.

ಒಂದು ವೇಳೆ ಇಂತಹ ಮೂರ್ತಿಗಳ ತಯಾರಿ ಅಥವಾ ಮಾರಾಟ ಮಾಡುವುದು ಕಂಡು ಬಂದರೆ ಅವುಗಳನ್ನು ವಶಕ್ಕೆ ಪಡೆಯಲು ಆಯಾ ವಲಯದ ಜಂಟಿ ಆಯುಕ್ತರು, ಆರೋಗ್ಯ ವೈದ್ಯಾಧಿಕಾರಿಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ (ಕಸ ನಿರ್ವಹಣೆ) ಅಧಿಕಾರ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ದಂಡ ವಿಧಿಸಿ, ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

‘ಮಣ್ಣಿನಿಂದ ತಯಾರಿಸಿದ, 2 ಅಡಿಗಿಂತ ಕಡಿಮೆ ಎತ್ತರದ ಗೌರಿ ಗಣೇಶ ಮೂರ್ತಿಯನ್ನು ಮನೆಗಳಲ್ಲಿ ಪೂಜಿಸಬಹುದು. ಇಂತಹ ವಿಗ್ರಹಗಳನ್ನು ಮನೆಯಲ್ಲೇ ವಿಸರ್ಜನೆ ಮಾಡಬೇಕು’ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ಆನ್‌ಲೈನ್‌ನಲ್ಲಿಯೇ ಬೆಂಗಳೂರು ಗಣೇಶ ಉತ್ಸವ
ದಕ್ಷಿಣ ಭಾರತದ ಅತಿದೊಡ್ಡ ಸಾಂಸ್ಕೃತಿಕ ಉತ್ಸವ (ಬಿಜಿಯು) ಎನಿಸಿರುವ ಬೆಂಗಳೂರು ಗಣೇಶ ಉತ್ಸವ ಈ ಬಾರಿ ವರ್ಚುವಲ್‌ ರೂಪದಲ್ಲಿ ನಡೆಯಲಿದೆ. 58ನೇ ಆವೃತ್ತಿಯ ಈ ಉತ್ಸವವು ಆ.22ರಿಂದ ಸೆ.1ರವರೆಗೆ ಫೇಸ್‌ಬುಕ್‌, ಯೂಟ್ಯೂಬ್, ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ವರ್ಚುವಲ್‌ ಲೈವ್‌ನಲ್ಲಿ ಜರುಗಲಿದೆ.

ಬಸವನಗುಡಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿರುವ ಗಣೇಶ ಮಂಟಪದಲ್ಲಿ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ದೈನಂದಿನ ಪೂಜೆಯನ್ನೂ ವರ್ಚುವಲ್‌ ಆಗಿ ತೋರಿಸಲಾಗುತ್ತದೆ. ಎಲ್ಲ 10 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಇದೇ ಸಭಾಂಗಣದಿಂದ ನೇರಪ್ರಸಾರವಾಗಲಿದೆ.

ಖ್ಯಾತ ಗಾಯಕರಾದ ವಿಜಯ್‌ಪ್ರಕಾಶ್, ರಘು ದೀಕ್ಷಿತ್‌ ಅವರ ಸಂಗೀತ ಕಾರ್ಯಕ್ರಮ, ಪ್ರವೀಣ್‌ ಡಿ. ನೇತೃತ್ವದಲ್ಲಿ ರಾಜ್ಯದ ಗಾಯಕರನ್ನು ಒಳಗೊಂಡ 12 ತಾಸುಗಳ ನಿರಂತರ ಸುಗಮ ಸಂಗೀತ, ಪ್ರವೀಣ್‌ ಗೋಡ್ಖಿಂಡಿಯವರ ಸಂಗೀತ ಕಛೇರಿ ಕಾರ್ಯಕ್ರಮಗಳು ಸಂಗೀತ ಪ್ರಿಯರನ್ನು ಆಕರ್ಷಿಸಲಿದೆ.

‘58 ವರ್ಷಗಳಲ್ಲಿ ನಾವು ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ಉತ್ಸವವನ್ನು ಉತ್ಸಾಹದಿಂದ ನಡೆಸಿಕೊಂಡು ಬಂದಿದ್ದೇವೆ. ಬೆಂಗಳೂರು ಜನರ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು ಈ ಬಾರಿ ವರ್ಚುವಲ್‌ ರೂಪದಲ್ಲಿ ಉತ್ಸವವನ್ನು ನಡೆಸಲು ತೀರ್ಮಾನಿಸಿದ್ದೇವೆ. ಎಲ್ಲ ಸವಾಲುಗಳ ನಡುವೆಯೂ, ಎಲ್ಲ ಸಂಗೀತಗಾರರು ಮತ್ತು ಕಲಾವಿದರ ಪ್ರದರ್ಶನ ನೀಡಲಿದ್ದಾರೆ’ ಎಂದು ಬಿಜಿಯು ವ್ಯವಸ್ಥಾಪಕ ಟ್ರಸ್ಟಿ ಎಸ್.ಎಂ. ನಂದೀಶ್‌ ಹೇಳಿದ್ದಾರೆ.

ಎಲ್ಲ ಪ್ರದರ್ಶನಗಳು ಮತ್ತು ದೈನಂದಿನ ಪೂಜೆಗಳನ್ನುfacebook.com/BengaluruGaneshUtsavaಮತ್ತುyoutube.com/user/BengaluruGaneshUtsavನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.