ಬೆಂಗಳೂರು: ಜೆ.ಪಿ.ನಗರದಲ್ಲಿ 30 ವರ್ಷದ ಹಳೆಯ ಕಟ್ಟಡ 2019ರಲ್ಲಿ ಕುಸಿದ ಬಳಿಕ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ನಗರದಾದ್ಯಂತ ದುಸ್ಥಿತಿಯಲ್ಲಿರುವ ಕಟ್ಟಡಗಳ ಸಮೀಕ್ಷೆ ಕೈಗೊಂಡಿತ್ತು.
ಈ ಸಮೀಕ್ಷೆಯ ಸಂದರ್ಭದಲ್ಲಿ ದುಸ್ಥಿತಿಯಲ್ಲಿರುವ 178 ಕಟ್ಟಡಗಳನ್ನು ನಗರದ ವಿವಿಧ ಭಾಗಗಳಲ್ಲಿ ಗುರುತಿಸಿತ್ತು. ಇವುಗಳಲ್ಲಿ 77 ಕಟ್ಟಡಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ, ನೋಟಿಸ್ ಜಾರಿ ನೀಡಿದ ಬಳಿಕ ಈ ಮಾಲೀಕರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಿಲ್ಲ. ಈ ಬಗ್ಗೆ ಅಧಿಕಾರಿಗಳ ಬಳಿಯೂ ಮಾಹಿತಿ ಇಲ್ಲ. 77ರಲ್ಲಿ ದಕ್ಷಿಣ ಮತ್ತು ಪೂರ್ವ ವಲಯದಲ್ಲಿ 33 ಕಟ್ಟಡಗಳಿದ್ದವು.
ಮಾಲೀಕರ ವಿರುದ್ಧ ಯಾವುದೇ ರೀತಿ ಕ್ರಮಕೈಗೊಳ್ಳದ ಕಾರಣದಿಂದಾಗಿಯೇ ಸೋಮವಾರ ಲಕ್ಕಸಂದ್ರನಲ್ಲಿನ ಮೂರು ಅಂತಸ್ತಿನ ಕಟ್ಟಡ ಕುಸಿಯಲು ಕಾರಣವಾಯಿತು ಎನ್ನುವ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.
‘ಸಮೀಕ್ಷೆಯ ಸಂದರ್ಭದಲ್ಲಿ ಲಕ್ಕಸಂದ್ರದಲ್ಲಿನ ಕಟ್ಟಡವನ್ನು ಗುರುತಿಸಿರುವ ಬಗ್ಗೆ ಮಾಹಿತಿಯನ್ನು ಪರಿಶೀಲಿಸಬೇಕಾಗಿದೆ. ಇನ್ನು ಮುಂದೆ ಪ್ರತಿ ವರ್ಷವೂ ಕಟ್ಟಡಗಳ ಸಮೀಕ್ಷೆ ಕೈಗೊಳ್ಳುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗುವುದು. ಇದರಿಂದ, ಹಳೆಯ ಮತ್ತು ದುಸ್ಥಿತಿಯಲ್ಲಿರುವ ಕಟ್ಟಡಗಳ ಮೇಲೆ ನಿಗಾವಹಿಸಲು ಸಾಧ್ಯವಾಗಲಿದೆ’ ಎಂದು ಬಿಬಿಎಂಪಿ ದಕ್ಷಿಣ ವಲಯದ ಜಂಟಿ ಆಯುಕ್ತ ವೀರಭದ್ರಸ್ವಾಮಿ ತಿಳಿಸಿದ್ದಾರೆ.
‘ಇಂದಿನ ಆಧುನಿಕ ಕಟ್ಟಡಗಳನ್ನು 25 ವರ್ಷಗಳ ಬಳಿಕ ಪ್ರತಿ ಐದು ವರ್ಷಗಳಿಗೊಮ್ಮೆ ಪರಿಶೀಲಿಸಬೇಕು. ಆದರೆ, ಬಿಬಿಎಂಪಿ ಇಂತಹ ಕಟ್ಟಡಗಳ ಮೇಲೆ ನಿಗಾವಹಿಸಿಲ್ಲ’ ಎಂದು ಬೆಂಗಳೂರು ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಕೇಂದ್ರದ (ಎಸಿಸಿಇ) ಅಧ್ಯಕ್ಷ ಶ್ರೀಕಾಂತ್ ಚನ್ನಾಳ್ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.