ಬೆಂಗಳೂರು: ಡಾಂಬರ್ ಮಿಶ್ರಣ ಮಾಡುವ ಘಟಕವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಅವರು ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳ ಕುರಿತು ಚರ್ಚಿಸಲು ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ನಗರದಲ್ಲಿ 1,300 ಕಿಲೋ ಮೀಟರ್ ಮುಖ್ಯ ರಸ್ತೆಗಳಿವೆ. ಯಾವ ರಸ್ತೆಯೂ ಗುಂಡಿಮಯ ಆಗಬಾರದು ಎಂಬ ಕಾರಣಕ್ಕೆ ಬಿಬಿಎಂಪಿಯಿಂದಲೇ ಡಾಂಬರ್ ಮಿಶ್ರಣ ಮಾಡುವ ಘಟಕ ತೆರೆಯಲಾಗಿದೆ. ಅ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದ ಕಾರಣಕ್ಕೆ ರಸ್ತೆಯಲ್ಲಿ ಗುಂಡಿಗಳು ಉಳಿದಿವೆ. ನಿಗದಿತ ಸಮಯದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಮುಗಿಸಬೇಕು’ ಎಂದು ತಿಳಿಸಿದರು.
‘ಸರ್ವೀಸ್ ರಸ್ತೆ, ಪಾದಚಾರಿ ಮಾರ್ಗಗಳನ್ನೂ ದುರಸ್ತಿಗೊಳಿಸಬೇಕು. ಯೋಜನಾ ವಿಭಾಗದಿಂದ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ರಸ್ತೆ ಹಾಗೂ ಸ್ಮಾರ್ಟ್ಸಿಟಿ ಲಿಮಿಟೆಡ್ ವತಿಯಿಂದ ಆರಂಭಿಸಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿ ನಡೆಯುತ್ತಿರುವ ಕಡೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಸೂಚನೆ ನೀಡಿದರು.
ಆಯುಕ್ತ ಎನ್. ಮಂಜುನಾಥ ಪ್ರಸಾದ್ ಮಾತನಾಡಿ, ‘ಕೆಲ ದಿನಗಳ ಕಾಲ ಮಳೆ ಇದ್ದ ಕಾರಣ ಸಮಸ್ಯೆ ಆಗಿದೆ. ಇನ್ನು ಮುಂದೆ ಅಧಿಕಾರಿಗಳು ಯಾವುದೇ ಸಬೂಬು ಹೇಳುವಂತಿಲ್ಲ. ಬೆಂಗಳೂರು ರಸ್ತೆಗಳನ್ನು ಗುಂಡಿ ಮುಕ್ತ ಮಾಡಬೇಕು’ ಎಂದು ತಿಳಿಸಿದರು.
‘ಡಾಂಬರ್ ಮಿಶ್ರ ಮಾಡುವ ಘಟಕದಲ್ಲಿ 10 ಗಂಟೆಗಳ ಅವಧಿಯಲ್ಲಿ 50ರಿಂದ 60 ಟ್ರಕ್ ಡಾಂಬರ್ ತಯಾರಿಸಬಹುದು. ಅದರೆ, ಸದ್ಯ ದಿನಕ್ಕೆ 10 ಟ್ರಕ್ ಮಾತ್ರ ಡಾಂಬರ್ ಉತ್ಪಾದನೆಯಾಗುತ್ತಿದೆ. ಸಾಮರ್ಥ್ಯಕ್ಕೆ ಅನುಗುಣವಾಗಿ ಡಾಂಬರ್ ಉತ್ಪಾದನೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.