ಬಿಬಿಎಂಪಿ
ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯದಲ್ಲಿ ವಾರ್ಡ್ಗಳಲ್ಲಿನ ಸಮಸ್ಯೆ ಹಾಗೂ ನಾಗರಿಕರ ಕುಂದುಕೊರತೆಗೆ ಪರಿಹಾರ ಒದಗಿಸದೆ ಕರ್ತವ್ಯಲೋಪ ಎಸಗಿದ ಮೂವರು ನೌಕರರನ್ನು ಪಾಲಿಕೆಯ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.
ಜಲಸಂಪನ್ಮೂಲ ಇಲಾಖೆಯಿಂದ ಬಂದಿದ್ದ ಸಹಾಯಕ ಎಂಜಿನಿಯರ್ಗಳಾದ ಸಂತೋಷ್, ಚಂದನ ಬಿ.ಎಸ್ ಅವರನ್ನು ಬಿಬಿಎಂಪಿ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಗುತ್ತಿಗೆ ಆಧಾರದಲ್ಲಿದ್ದ ಕಿರಿಯ ಆರೋಗ್ಯ ಪರಿವೀಕ್ಷಕ ಬಾಬು ಅವರ ನೇಮಕಾತಿಯ ಗುತ್ತಿಗೆ ರದ್ದುಪಡಿಸಲಾಗಿದೆ.
ಪಶ್ಚಿಮ ವಲಯದ ವಿವಿಧ ವಾರ್ಡ್ಗಳಲ್ಲಿನ ಸಮಸ್ಯೆಗಳು ಮತ್ತು ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಜುಲೈ 1, 2 ಹಾಗೂ 14ರಂದು ನಡೆದ ಸಭೆಯಲ್ಲಿ ಕ್ರಮ ಕೈಗೊಳ್ಳುವಂತೆ ಮೂವರಿಗೆ ಮುಖ್ಯ ಆಯುಕ್ತರು ಸೂಚಿಸಿದ್ದರು.
ಮುಖ್ಯ ಆಯುಕ್ತರು ವಾರ್ಡ್-102ರ ವೃಷಭಾವತಿನಗರ, ಮಹಾಲಕ್ಷ್ಮೀಪುರ ವಿಭಾಗದಲ್ಲಿ ಶುಕ್ರವಾರ ಬೆಳಿಗ್ಗೆ ನಡಿಗೆ ಮೂಲಕ ತಪಾಸಣೆ ಕೈಗೊಂಡ ಸಂದರ್ಭದಲ್ಲಿ ರಸ್ತೆ ಗುಂಡಿಗಳು, ಪಾದಚಾರಿ ಮಾರ್ಗದ ಅಂಚಿನಲ್ಲಿ ತ್ಯಾಜ್ಯ, ಪಾದಚಾರಿ ಮಾರ್ಗದ ಮೇಲೆ ಮನೆ ಕಟ್ಟಡದ ಭಗ್ನಾವಶೇಷಗಳನ್ನು ಸುರಿದಿರುವುದು ಮತ್ತು ರಸ್ತೆಯ ಬದಿಯಲ್ಲಿ ಘನತ್ಯಾಜ್ಯವನ್ನು ಸ್ವಚ್ಚಗೊಳಿಸದಿರುವುದು ಕಂಡುಬಂತು. ಅಲ್ಲದೆ, ದೂರು ನೀಡಿದ್ದರೂ ಕ್ರಮವಾಗಿಲ್ಲ ಎಂದು ನಾಗರಿಕರು ಮುಖ್ಯ ಆಯುಕ್ತರಿಗೆ ತಿಳಿಸಿದರು.
‘ಸಮಸ್ಯೆಗಳನ್ನು ಬಗೆಹರಿಸಲು ಮೂವರು ನೌಕರರು ಕ್ರಮ ತೆಗೆದುಕೊಂಡಿಲ್ಲ. ಕರ್ತವ್ಯದಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರಿದ್ದಾರೆ. ಆದ್ದರಿಂದ ಇವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ’ ಎಂದು ಪಶ್ಚಿಮ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.