ADVERTISEMENT

14 ಸಾವಿರ ಮೀ. ಉದ್ದದ ಕೇಬಲ್‌ ಕಿತ್ತ ಪಾಲಿಕೆ

ಮಹದೇವಪುರ ವಲಯ: ಪಾದಚಾರಿ ಮಾರ್ಗದಲ್ಲಿದ್ದ 15 ಮಳಿಗೆಗಳ ತೆರವು

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 15:42 IST
Last Updated 31 ಜುಲೈ 2021, 15:42 IST
ವರ್ತೂರು ಕೋಡಿ ಬಳಿ ಬಿಬಿಎಂಪಿ ಸಿಬ್ಬಂದಿ ಅನಧಿಕೃತ ಕೇಬಲ್‌ಗಳನ್ನು ಶನಿವಾರ ತೆರವುಗೊಳಿಸಿದರು
ವರ್ತೂರು ಕೋಡಿ ಬಳಿ ಬಿಬಿಎಂಪಿ ಸಿಬ್ಬಂದಿ ಅನಧಿಕೃತ ಕೇಬಲ್‌ಗಳನ್ನು ಶನಿವಾರ ತೆರವುಗೊಳಿಸಿದರು   

ಬೆಂಗಳೂರು: ಮಹದೇವಪುರ ವಲಯದಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಆಪ್ಟಿಕ್‌ ಫೈಬರ್‌ ಕೇಬಲ್‌ಗಳನ್ನು (ಒಎಫ್‌ಸಿ) ತೆಗೆಯಿಸಲು ಹಾಗೂ ಪಾದಚಾರಿ ಮಾರ್ಗದ ಒತ್ತುವರಿ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿದರು. ಒಟ್ಟು 14,060 ಮೀ. ಉದ್ದದ ಕೇಬಲ್‌ಗಳನ್ನು ಒಂದೇ ದಿನ ತೆರವುಗೊಳಿಸಲಾಗಿದೆ.

ಅನಧಿಕೃತವಾಗಿ ಅಳವಡಿಸಲಾಗಿದ್ದ ಕೇಬಲ್‌ಗಳಿಂದ ಪಾದಚಾರಿ ಮಾರ್ಗಗಳಲ್ಲಿ ಸಂಚರಿಸುವವರಿಗೆ ಅಡ್ಡಿ ಉಂಟಾಗುತ್ತಿತ್ತು.ಹೈಕೋರ್ಟ್‌ ಆದೇಶ ಹಾಗೂ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ನಿರ್ದೇಶನದ ಮೇರೆಗೆ ಬಿಬಿಎಂಪಿ ಅಧಿಕಾರಿಗಳು ಇಂತಹ ಕೇಬಲ್‌ ತೆರವುಗೊಳಿಸಲು ಕ್ರಮಕೈಗೊಂಡಿದ್ದರು.

ಹೂಡಿ, ಮಾರತ್ತಹಳ್ಳಿ, ಮಹದೇವಪುರ ಹಾಗೂ ಎಚ್.ಎ.ಎಲ್ ಉಪವಿಭಾಗಗಳ ವ್ಯಾಪ್ತಿಯ ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗ, ಮರಗಳ ಮೇಲೆ ಹಾಗೂ ವಿದ್ಯುತ್‌ ಕಂಬಗಳ ಮೇಲೆ ನೇತಾಡುತ್ತಿರುವ ಕೇಬಲ್‌ಗಳನ್ನು ತೆರವುಗೊಳಿಸಲಾಯಿತು. ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದ 15 ಮಳಿಗೆಗಳನ್ನು ಕೂಡಾ ತೆರವುಗೊಳಿಸಲಾಯಿತು.

ADVERTISEMENT

‘ಅನಧಿಕೃತವಾಗಿ ಕೇಬಲ್‌ ಅಳವಡಿಸದಂತೆ ಪದೇ ಪದೇ ಎಚ್ಚರಿಕೆ ನಿಡಿದರೂ ಈ ಪರಿಪಾಠ ಮುಂದುವರಿಯುತ್ತಲೇ ಇದೆ. ಇನ್ನು ಪಾದಚಾರಿ ಮಾರ್ಗಗಳಲ್ಲಿ ಕೇಬಲ್‌ಗಳನ್ನು ಅಳವಡಿಸಿದರೆ, ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲಿದ್ದೇವೆ. ಪಾದಚಾರಿ ಮಾರ್ಗವು ಸಾರ್ವಜನಿಕರ ಬಳಿಕೆಗೆ ಇರುವಂತಹದ್ದು. ಅಲ್ಲಿ ಪಾದಚಾರಿಗಳ ಓಡಾಟಕ್ಕೆ ಅಡ್ಡಿ‍ಪಡಿಸುವ ಯಾವುದೇ ಚಟುವಟಿಕೆಗೆ ಆಸ್ಪದ ಇಲ್ಲ. ಇನ್ನು ಮುಂದೆಯೂ ಯಾರಾದರೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿದರೆ, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದ್ದೇವೆ. ವಲಯದ ಇತರ ಉಪ ವಿಭಾಗಗಳಲ್ಲೂ ಈ ಕಾರ್ಯಾಚರಣೆ ನಡೆಸಲಿದ್ದೇವೆ’ ಎಂದು ಮಹದೇವಪುರ ವಲಯದ ಮುಖ್ಯ ಎಂಜಿನಿಯರ್ ಆರ್.ಎಲ್.ಪರಮೇಶ್ವರಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.