ಬೆಂಗಳೂರು: ಪೌರಕಾರ್ಮಿಕ ಮಹಿಳೆಯರಿಬ್ಬರಿಗೆ ನೀರು ಕೇಳಿದಾಗ ಮಹಿಳೆಯೊಬ್ಬರು ಅವಮಾನಿಸಿದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ. ಕುಮಾರ ನಾಯಕ್ ಅವರು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಚಿಕ್ಕಸಂದ್ರದಲ್ಲಿ ಪೌರಕಾರ್ಮಿಕ ಮಹಿಳೆಯರು ನೀರು ಕೇಳಿದಾಗ ಮನೆಯಿಂದ ನೀರು ತಂದುಕೊಡುವ ಮಹಿಳೆ, ಅವರನ್ನು ಅವಮಾನಿಸುವ ರೀತಿಯಲ್ಲಿ ನಡೆದುಕೊಂಡ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅದೇ ದಿನ ಸಂಜೆ ಪೌರಕಾರ್ಮಿಕರು ಇನ್ನೊಂದು ವಿಡಿಯೊ ಬಿಡುಗಡೆ ಮಾಡಿ ಅದು ಅಣಕು ಪ್ರದರ್ಶನ ಎಂದು ಸ್ಪಷ್ಟಪಡಿಸಿದ್ದರು.
‘ಆದರೆ, ಎರಡನೇ ವಿಡಿಯೊವನ್ನು ಪೌರಕಾರ್ಮಿಕರಿಂದ ಇದನ್ನು ಬಲವಂತವಾಗಿ ಮಾಡಿಸಲಾಗಿದೆ ಎಂಬ ದೂರುಗಳು ಬಂದಿವೆ. ಹೀಗಾಗಿ, ಮನೆಯ ಮಹಿಳೆ, ಮೇಸ್ತ್ರಿ ಮತ್ತು ಅಧಿಕಾರಿಗಳ ಹೇಳಿಕೆ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆಲಸ ಮಾಡುವ ಸ್ಥಳದಲ್ಲಿ ಪೌರಕಾರ್ಮಿಕರಿಗೆ ನೀರು, ಶೌಚಾಲಯ ಮತ್ತಿತರ ವ್ಯವಸ್ಥೆಗಳನ್ನು ಒದಗಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು’ ಎಂದು ಕುಮಾರ ನಾಯಕ್ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.