ಬೆಂಗಳೂರು: ನಿತ್ಯ 20 ಸಾವಿರ ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವ ಗುರಿಯನ್ನು ಬಿಬಿಎಂಪಿ ಹೊಂದಿದೆ. ಆದರೆ, ಮಾನವ ಸಂಪನ್ಮೂಲ ಕೊರತೆಯಿಂದಾಗಿ ಇದನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಜನರ ಗಂಟಲ ದ್ರವ ಸಂಗ್ರಹಿಸಲು ಆಶಾ ಕಾರ್ಯಕರ್ತೆಯರಿಗೆ ಹಾಗೂ ಸಂಪರ್ಕ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಈ ಕಾರ್ಯಕ್ಕೆ ಬಳಸಿಕೊಳ್ಳಲು ಬಿಬಿಎಂಪಿ ಮುಂದಾಗಿದೆ.
ಆಶಾ ಕಾರ್ಯಕರ್ತೆಯರು ಹಾಗೂ ಸಂಪರ್ಕ ಕಾರ್ಯಕರ್ತೆಯರಿಗೆ ಪ್ರತಿ ವ್ಯಕ್ತಿಯ ಗಂಟಲ ದ್ರವ ಸಂಗ್ರಹಣೆಗೆ ₹ 30 ನೀಡಲಿದೆ.
‘ನಗರದಲ್ಲಿ ಕೋವಿಡ್ ಪರೀಕ್ಷೆ (ಆರ್ಟಿಪಿಸಿಆರ್/ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ) ನಡೆಸುವ ಕುರಿತು ನಿಗದಿಪಡಿಸಿದ ಗುರಿ ತಲುಪುವ ಸಲುವಾಗಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್ಸಿ) ವ್ಯಾಪ್ತಿಯಲ್ಲಿ ನಿತ್ಯ 100 ಮಂದಿ ಪರೀಕ್ಷೆ ನಡೆಸಬೇಕು. ಒಂದು ವಾರವ ಮುನ್ನವೇ ಕೋವಿಡ್ ಪರೀಕ್ಷೆ ಕುರಿತು ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ಈ ಸಲುವಾಗಿ ಸಂಚಾರ ತಂಡಗಳನ್ನು ಹಾಗೂ ಸ್ಥಾನಿಕ ತಂಡಗಳನ್ನು ಸಜ್ಜುಗೊಳಿಸಬೇಕು. ವಲಯದ ಆರೋಗ್ಯಾಧಿಕಾರಿಗಳು ಹಾಗೂ ವಲಯ ಸಮನ್ವಯಾಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕು’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಆದೇಶ ಬುಧವಾರ ಹೊರಡಿಸಿದ್ದಾರೆ.
ಕೋವಿಡ್ ಪರೀಕ್ಷೆ ಹೆಚ್ಚಿಸುವ ಸಲುವಾಗಿ 198 ವಾರ್ಡ್ಗಳಿಗೆ 297 ವೈದ್ಯಕೀಯ ಅಧಿಕಾರಿಗಳು, 199 ಶುಶ್ರೂಷಕಿಯರು, 476 ಆರೋಗ್ಯ ಸಹಾಯಕಿಯರನ್ನು 120 ಎನ್ಎಸ್ಎಸ್ ಸ್ವಯಂಸೇವಕರು ಒಳಗೊಂಡಂತೆ 1,805 ಸಿಬ್ಬಂದಿಯನ್ನು ಪಾಲಿಕೆ ನಿಯೋಜಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.