ಬೆಂಗಳೂರು: ಚಾಕುವಿನಿಂದ ಕತ್ತು ಕೊಯ್ದು ತಾಯಿ ಹಾಗೂ ಮಗುವನ್ನು ಕೊಲೆ ಮಾಡಿರುವ ಘಟನೆ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಚೌಡೇಶ್ವರಿ ಲೇಔಟ್ನಲ್ಲಿ ಬುಧವಾರ ನಡೆದಿದೆ.
ಚಂದ್ರಕಲಾ (40) ಹಾಗೂ ರಾತನ್ಯ (4) ಕೊಲೆಯಾದವರು.
‘ಮುಂಜಾನೆ ಪತಿ ಕೆಲಸಕ್ಕೆ ಹೋದ ಬಳಿಕ ದುಷ್ಕರ್ಮಿ ಮನೆಗೆ ನುಗ್ಗಿ ಕೊಲೆ ಮಾಡಿರಬಹುದು. ಸಂಬಂಧಿಕರು ಸಂಜೆ ಮನೆಗೆ ಬಂದು ನೋಡಿದಾಗ ಹಾಲ್ನಲ್ಲಿ ತಾಯಿ ಹಾಗೂ ಕೊಠಡಿಯಲ್ಲಿ ಹೆಣ್ಣು ಮಗುವಿನ ಮೃತದೇಹ ಪತ್ತೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದ್ರಕಲಾ ಅವರ ಪತಿ ಚೆನ್ನವೀರ ಸ್ವಾಮಿ ಅವರು ಗಾರ್ಮೆಂಟ್ಸ್ ನೌಕರ. ಚಿತ್ರದುರ್ಗದ ಬಂಗಾರಕ್ಕನಹಳ್ಳಿಯವರಾದ ಇವರು ಪತ್ನಿ ಮತ್ತು ಮಗುವಿನ ಜೊತೆ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಮೃತ ಚಂದ್ರಕಲಾ ಆಯುರ್ವೇದಿಕ್ ವಸ್ತುಗಳ ಆನ್ಲೈನ್ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳು. ಮತ್ತೊಂದು ಮಗುವನ್ನು ಹಾಸ್ಟೆಲ್ನಲ್ಲಿ ಓದಿಸುತ್ತಿದ್ದರು’ ಎಂದು ಹೇಳಿದ್ದಾರೆ.
‘ಚೆನ್ನವೀರ ಸ್ವಾಮಿ ಅವರು ಬೆಳಿಗ್ಗೆ 9.30ರ ಸುಮಾರಿಗೆ ಮನೆಯಿಂದ ಗಾರ್ಮೆಂಟ್ಸ್ಗೆ ತೆರಳಿದ್ದರು. 10.30ರ ಸುಮಾರಿಗೆ ಮನೆ ಪ್ರವೇಶಿಸಿರುವ ಅಪರಿಚಿತ ವ್ಯಕ್ತಿಯೊಬ್ಬ ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಹೊರಬಂದಿದ್ದಾನೆ. ಆತನೇ ಕೊಲೆ ಮಾಡಿರುವ ಸಾಧ್ಯತೆ ಇದೆ. ಆತ ಮನೆಯಲ್ಲಿದ್ದ ಚಿನ್ನಾಭರಣಗಳನ್ನೂ ದೋಚಿಕೊಂಡು ಹೋಗಿದ್ದಾನೆ. ಬಡಾವಣೆಯಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಶೀಘ್ರವೇ ಆತನನ್ನು ಬಂಧಿಸಲಾಗುತ್ತದೆ’ ಎಂದೂ ಮಾಹಿತಿ ನೀಡಿದ್ದಾರೆ.
‘ಚಂದ್ರಕಲಾ ಅವರ ಸಹೋದರಿ ಮೃತದೇಹಗಳನ್ನು ನೋಡಿ ಮೊದಲು ಅವರ ಪತಿಗೆ ವಿಷಯ ತಿಳಿಸಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಸಿಕ್ಕಿರುವ ಕುರುಹುಗಳ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ. ಆರೋಪಿಯ ಪತ್ತೆಗೆ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.