ADVERTISEMENT

ಬೆಳಗಾವಿ| ಕ್ರೇನ್‌ ಬ್ರೇಕ್‌ ವಿಫಲ: ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 18:17 IST
Last Updated 2 ಡಿಸೆಂಬರ್ 2022, 18:17 IST
ಬೆಳಗಾವಿಯ ರಾಮದೇವ ಸರ್ಕಲ್‌ ಬಳಿ ಶುಕ್ರವಾರ ರಾತ್ರಿ ಅಪಘಾತಕ್ಕೀಡಾದ ಕ್ರೇನ್‌
ಬೆಳಗಾವಿಯ ರಾಮದೇವ ಸರ್ಕಲ್‌ ಬಳಿ ಶುಕ್ರವಾರ ರಾತ್ರಿ ಅಪಘಾತಕ್ಕೀಡಾದ ಕ್ರೇನ್‌   

ಬೆಳಗಾವಿ: ಇಲ್ಲಿನ ರಾಮದೇವ ಸರ್ಕಲ್‌ ಬಳಿಯ ರಾಮದೇವ ಹೋಟೆಲ್‌ ಮುಂದೆ ಶುಕ್ರವಾರ ರಾತ್ರಿ ಕ್ರೇನಿನ ಬ್ರೇಕ್‌ ಫೇಲ್‌ ಆಗಿ ರಸ್ತೆ ವಿಭಜಕಕ್ಕೆ ಗುದ್ದಿದೆ. ಕೂದಲೆಳೆ ಅಂದರದಲ್ಲೇ ದೊಡ್ಡ ಅನಾಹುತ ತಪ್ಪಿದೆ.

ಕೆಎಲ್‌ಇ ಆಸ್ಪತ್ರೆಯ ಕಡೆಯಿಂದ ಕೃಷ್ಣದೇವರಾಯ ಸರ್ಕಲ್‌ ಕಡೆಗೆ ಬರುತ್ತಿದ್ದ ಕ್ರೇನ್‌ ಇಳಿಜಾರಿನಲ್ಲಿ ವೇಗವಾಗಿ ಹೋಗುತ್ತಿತ್ತು. ಈ ವೇಳೆ ಏಕಾಏಕಿ ಬ್ರೇಕ್‌ ವಿಫಲವಾಯಿತು. ಕ್ರೇನಿನ ಮುಂದೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್‌ ರಸ್ತೆಯ ಬದಿಯ ನಿಲ್ದಾಣದ ಮುಂದೆ ನಿಂತಿತ್ತು. ಇನ್ನೇನು ಅದಕ್ಕೆ ಕ್ರೇನ್‌ ಗುದ್ದಿಬಿಡುತ್ತದೆ ಎನ್ನುವಷ್ಟರಲ್ಲಿ ಚಾಲಕ ಕ್ರೇನ್‌ ಅನ್ನು ಎಡಕ್ಕೆ ತಿರುವಿದರು. ಅದರ ಮುಂಭಾಗ ರಸ್ತೆ ವಿಭಜಕಕ್ಕೆ ಗುದ್ದಿ ನಿಂತಿತು. ಮೇಲ್ಭಾಗ ರಸ್ತೆಯ ಇನ್ನೊಂದು ಬದಿಗೆ ಜೋತು ಬಿದ್ದಿತು.

ಇಕ್ಕೆಲಗಳಲ್ಲೂ ಸಾಕಷ್ಟು ವಾಹನಗಳು ಓಡಾಡುತ್ತಿದ್ದವು. ಕ್ರೇನ್‌ ಗುದ್ದಿದ ಸ್ಥಳದಲ್ಲೇ ಎರಡು ವಿದ್ಯುತ್‌ ಕಂಬಗಳೂ ಇವೆ. ಚಾಲಕ ಕ್ರೇನ್‌ ತಿರುಗಿಸಿದ ರಭಸಕ್ಕೆ ಅದರ ಮುಂದಿನ ಚಕ್ರಗಳೂ ಕಿತ್ತುಬಿದ್ದವು. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲ.

ADVERTISEMENT

ಇನ್ನೊಂದು ಕ್ರೇನ್ ತರಿಸಿ ಅಪಘಾತಕ್ಕೀಡಾದ ಕ್ರೇನನ್ನು ತೆರವು ಮಾಡಲಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.