ADVERTISEMENT

ಬೆಂಗಳೂರು ವಿಮಾನ ನಿಲ್ದಾಣ: ಗುದದ್ವಾರದಲ್ಲಿತ್ತು ₹1.52 ಕೋಟಿ ಮೌಲ್ಯದ ಚಿನ್ನ!

ಕಸ್ಟಮ್ಸ್ ಅಧಿಕಾರಿಗಳಿಂದ ಜಪ್ತಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 1:41 IST
Last Updated 23 ನವೆಂಬರ್ 2021, 1:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ 10 ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅವರಿಂದ ₹ 1.52 ಕೋಟಿ ಮೌಲ್ಯ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

‘ಕೊಲಂಬೊದಿಂದ ವಿಮಾನದಲ್ಲಿ ನ. 20ರಂದು ನಗರದ ನಿಲ್ದಾಣಕ್ಕೆ ಬರುತ್ತಿದ್ದ ಕೆಲ ಪ್ರಯಾಣಿಕರು ಚಿನ್ನ ಸಾಗಿಸುತ್ತಿದ್ದ ಮಾಹಿತಿ ಲಭ್ಯವಾಗಿತ್ತು. ನಿಲ್ದಾಣದಲ್ಲಿ ಪ್ರಯಾಣಿಕರನ್ನು ತಡೆದು ಪರಿಶೀಲನೆ ನಡೆಸಿದಾಗಲೇ ಅಕ್ರಮ ಸಾಗಣೆ ಪತ್ತೆಯಾಯಿತು’ ಎಂದು ಕಸ್ಟಮ್ಸ್ ಮೂಲಗಳು ಹೇಳಿವೆ.

‘10 ಪ್ರಯಾಣಿಕರ ಬಳಿ ಚಿನ್ನವಿರುವ ಸುಳಿವು ಲೋಹ ಶೋಧಕದಿಂದ ಗೊತ್ತಾಯಿತು. ಬ್ಯಾಗ್‌ ಹಾಗೂ ಬಟ್ಟೆಗಳಲ್ಲಿ ಹುಡುಕಾಡಿದರೂ ಚಿನ್ನ ಪತ್ತೆಯಾಗಲಿಲ್ಲ. ಪ್ರತ್ಯೇಕ ಕೊಠಡಿಗೆ ಕರೆದೊಯ್ದು ತಪಾಸಣೆ ನಡೆಸಿದಾಗ, ಪ್ರಯಾಣಿಕರ ಗುದದ್ವಾರದಲ್ಲಿ ಪೇಸ್ಟ್‌ ರೂಪದಲ್ಲಿ ಚಿನ್ನ ಸಿಕ್ಕಿತು’ ಎಂದೂ ತಿಳಿಸಿವೆ.

ADVERTISEMENT

‘ಆರೋಪಿಗಳು ಹಲವು ದಿನಗಳಿಂದ ಸಾಮೂಹಿಕವಾಗಿ ಚಿನ್ನ ಅಕ್ರಮ ಸಾಗಣೆಯಲ್ಲಿ ತೊಡಗಿರುವುದು ಗೊತ್ತಾಗಿದೆ. ಈ ಜಾಲದಲ್ಲಿ ಮತ್ತಷ್ಟು ಮಂದಿ ಭಾಗಿಯಾಗರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದೂ ಕಸ್ಟಮ್ಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.