ಬೆಂಗಳೂರು: ‘ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ನಿಯಮಿತ’ (ಬಿ–ಸ್ಮೈಲ್) ವತಿಯಿಂದ ನಿರ್ಮಿಸಬೇಕಿದ್ದ ‘ಆಕಾಶ ಗೋಪುರ’ವನ್ನು (ಸ್ಕೈಡೆಕ್) ಬಿಡಿಎಗೆ ವರ್ಗಾಯಿಸಲಾಗಿದ್ದು, ಕೆಂಗೇರಿಯ ರಾಮಸಂದ್ರದಲ್ಲಿ 41 ಎಕರೆಯಲ್ಲಿ ನಿರ್ಮಿಸಲು ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.
ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿ ಕೊಮ್ಮಘಟ್ಟ ಗ್ರಾಮಕ್ಕೆ ಹೊಂದಿಕೊಂಡಿರುವ, ರಾಮಸಂದ್ರ ಗ್ರಾಮದ ಸರ್ವೆ ನಂ. 40ರಲ್ಲಿ 41 ಎಕರೆ 12 ಗುಂಟೆ ಜಮೀನಿನಲ್ಲಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಂತಿಮ ಅಧಿಸೂಚನೆ ಹೊರಡಿಸಿರುವ 27 ಎಕರೆ 19 ಗುಂಟೆ ಜಮೀನಿಗೆ ಐ–ತೀರ್ಪು ರಚಿಸಿ, ನೈಸ್ ಕಂಪನಿಯ ನಿರಾಕ್ಷೇಪಣಾ ಪತ್ರ ಪಡೆದು ಬಿಡಿಎಗೆ ಭೂಮಿಯನ್ನು ಹಸ್ತಾಂತರಿಸಿಕೊಳ್ಳಬೇಕು.
ರಾಮಸಂದ್ರದ ಸರ್ವೆ ನಂ.40ರಲ್ಲಿ ನೈಸ್ ಸಂಸ್ಥೆಗೆ ಗುತ್ತಿಗೆ ನೀಡಿರುವ 8 ಎಕರೆ 12 ಗುಂಟೆ ಮತ್ತು ಕೆಐಎಡಿಬಿ ನೀಡಿರುವ 13 ಎಕರೆ 33 ಗುಂಟೆಯಲ್ಲಿ ನೈಸ್ ಸಂಸ್ಥೆ 8 ಎಕರೆ 33 ಗುಂಟೆಯನ್ನು ಉಪಯೋಗಿಸಿಕೊಂಡಿಲ್ಲ. ಅವರ ಗುತ್ತಿಗೆ ರದ್ದಿಪಡಿಸಿ, ಜಮೀನನ್ನು ಬಿಡಿಎ ಪಡೆದುಕೊಳ್ಳಬೇಕು.
ರಾಮಸಂದ್ರ ಸರ್ವೆ ನಂ. 39ರಲ್ಲಿ 49 ಎಕರೆ 3 ಗುಂಟೆ ಸರ್ಕಾರಿ ಜಮೀನಿನಲ್ಲಿ 5 ಎಕರೆ ಜಮೀನನ್ನು ಜಿಲ್ಲಾಧಿಕಾರಿಯವರು ಬಿಡಿಎಗೆ ಹಸ್ತಾಂತರಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಡಿಸೈನ್ ಟ್ರೀ ಸಂಸ್ಥೆಗೆ ‘ಆಕಾಶ ಗೋಪುರ’ದ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಬಿಬಿಎಂಪಿ/ ಬಿ–ಸ್ಮೈಲ್ ಕಾರ್ಯಾದೇಶ ನೀಡಿದ್ದು, ಅದು ವ್ಯರ್ಥವಾಗದಂತೆ ಯೋಜನೆಯನ್ನು ಮುಂದುವರಿಸಬೇಕು. ಡಿಪಿಆರ್ ತಯಾರಿಸಿದ ಮೇಲೆ ಅದನ್ನು ಬಿಡಿಎಗೆ ಹಸ್ತಾಂತರಿಸಬೇಕು ಎಂದು ಆದೇಶಿಸಲಾಗಿದೆ.
‘ಆಕಾಶ ಗೋಪುರ’ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಬಿಡಿಎ ಭರಿಸಬೇಕು. ಅದರಿಂದ ಬರುವ ಆದಾಯವನ್ನು ಪಡೆದುಕೊಳ್ಳಬಹುದು. ಸುತ್ತಮುತ್ತಲಿನ ನಿವಾಸಿಗಳ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ, ‘ಆಕಾಶ ಗೋಪುರ’ಕ್ಕೆ ನೈಸ್ ರಸ್ತೆ ಅಥವಾ ರಾಜ್ಯ/ ರಾಷ್ಟ್ರೀಯ ಹೆದ್ದಾರಿಗಳಿಂದ ನೇರವಾಗಿ ಸಂಪರ್ಕ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ.
‘ಆಕಾಶ ಗೋಪುರ’ ಯೋಜನೆಯ ಡಿಪಿಆರ್ ಅಂತಿಮಗೊಂಡ ಮೇಲೆ ಟೆಂಡರ್ ಇತರೆ ಪ್ರಕ್ರಿಯೆ ಆರಂಭವಾಗುತ್ತದೆ. ಆ ವೇಳೆಗೆ ಭೂಮಿ ಹಸ್ತಾಂತರ ಪ್ರಕ್ರಿಯೆ ಮುಗಿಯಲಿದೆ. ₹500 ಕೋಟಿಗೂ ಹೆಚ್ಚು ವೆಚ್ಚದಲ್ಲಿ ‘ಆಕಾಶ ಗೋಪುರ’ ನಿರ್ಮಿಸಲಾಗುತ್ತದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.