ಸಾವು (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಶಾಂತಿನಗರದ ರೆಸಿಡೆನ್ಸಿ ರಸ್ತೆಯ ರಿಚ್ಮಂಡ್ ವೃತ್ತದ ಮೇಲ್ಸೇತುವೆಯಲ್ಲಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಮೇಲ್ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದಾರೆ. ಹಿಂಬದಿಯ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೊಮ್ಮನಹಳ್ಳಿ ಬೇಗೂರು ರಸ್ತೆಯ ವಿಶ್ವಪ್ರಿಯ ನಗರದ ಶ್ರೇಯಸ್ ಪಾಟೀಲ್ (19) ಮೃತ ಯುವಕ. ಹಿಂಬದಿಯ ಸವಾರ, ಅಕ್ಷಯ ನಗರದ ನಿವಾಸಿ ಕೆ.ಚೇತನ್ ಗಾಯಗೊಂಡವರು.
ಪಾಟೀಲ್ ಶಿವಾನಂದ ಅವರು ನೀಡಿದ ದೂರು ಆಧರಿಸಿ ಅಶೋಕ ನಗರದ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಗುರುವಾರ ಮುಂಜಾನೆ ಇಬ್ಬರೂ ರಿಚ್ಮಂಡ್ ಮೇಲ್ಸೇತುವೆಯಲ್ಲಿ ಶಾಂತಿನಗರದ ಕಡೆಯಿಂದ ಕ್ಯಾಶ್ ಫಾರ್ಮಸಿ ಜಂಕ್ಷನ್ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ಶ್ರೇಯಸ್ ಪಾಟೀಲ್ ಅವರು ಬೈಕ್ ಓಡಿಸುತ್ತಿದ್ದರು. ಬೈಕ್ ಅನ್ನು ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದರು. ತಡೆಗೋಡೆಗೆ ಬೈಕ್ ಡಿಕ್ಕಿ ಆಗಿದ್ದರಿಂದ ಇಬ್ಬರೂ ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದು ಗಾಯಗೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಸವಾರ ಮಾರ್ಗ ಮಧ್ಯದಲ್ಲಿ ಮೃತಪಟ್ಟರು. ಕೆ.ಚೇತನ್ ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.