ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಹನ್ನೊಂದು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಕೆ.ಆರ್.ಮಾರುಕಟ್ಟೆ ಬಳಿ ಭಾನುವಾರ ನಡೆದಿದೆ.
ಜಿ.ಎಂ.ಪಾಳ್ಯ ನಿವಾಸಿ ಸುನಿಲ್ ಕುಮಾರ್ ಅವರ ಅಣ್ಣನ ಮಗ ಶಬರೀಶ್ ಮೃತ ಬಾಲಕ.
ಸ್ಥಳೀಯ ದೇವಸ್ಥಾನದ ಅರ್ಚಕರಾಗಿರುವ ಸುನಿಲ್ ಕುಮಾರ್ ಅವರು ತನ್ನ ಅಣ್ಣ ದಿವಂಗತ ದಿಲೀಪ್ ಕುಮಾರ್ ಅವರ ಮಗನ ಜತೆ ದ್ವಿಚಕ್ರ ವಾಹನದಲ್ಲಿ ಕೆ.ಆರ್.ಮಾರ್ಕೆಟ್ಗೆ ಸಂಜೆ 5ರ ಸುಮಾರಿಗೆ ಬಂದಿದ್ದರು. ಈ ವೇಳೆ ದ್ವಿಚಕ್ರ ವಾಹನಕ್ಕೆ ಬಸ್ ತಾಗಿದ್ದರಿಂದ ಶಬರೀಶ್ ಕೆಳಗೆ ಬಿದ್ದಿದ್ದಾನೆ. ಆಗ ಆತನ ಮೇಲೆ ಬಸ್ನ ಚಕ್ರಗಳು ಹರಿದ ಪರಿಣಾಮ, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಲ ಭಾಗಕ್ಕೆ ಬಿದ್ದ ಸುನಿಲ್ ಕುಮಾರ್ ಅವರಿಗೆ ಸಣ್ಣ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಎಂಟಿಸಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾರ್ವಜನಿಕರು, ವ್ಯಾಪಾರಿಗಳು ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡರು. ಮೃತನ ಬಾಲಕನ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಸ್ ಚಾಲಕ ಸಂತೋಷ್, ನಿರ್ವಾಹಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆ ಶವಗಾರಕ್ಕೆ ರವಾನೆ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕು ದಿನಗಳ ಹಿಂದೆಯಷ್ಟೇ ಬಿಎಂಟಿಸಿ ಬಸ್ 5ನೇ ತರಗತಿ ವಿದ್ಯಾರ್ಥಿನಿ ತನ್ವೀ ಕೃಷ್ಣ (10) ತಲೆಯ ಮೇಲೆ ಹರಿದ ಪರಿಣಾಮ ಮೃತಪಟ್ಟಿದ್ದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.