ಬೆಂಗಳೂರು: ಆಟೊ ಚಾಲಕನೊಬ್ಬ ಸಿನಿಮೀಯ ಶೈಲಿಯಲ್ಲಿ ಸರ ಕಳ್ಳನನ್ನು ಸೆರೆಹಿಡಿದ ಘಟನೆ ನಗರದ ಮಾರತಹಳ್ಳಿಯ ಮ್ಯಾಕ್ಸ್ ಶೋ ರೂಂ ಬಳಿ ನಡೆದಿದೆ.
ಆರೋಪಿ ಸ್ಕೂಟರ್ ಸವಾರ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬರು ಧರಿಸಿದ್ದ ಚಿನ್ನದ ಸರ ಅಪಹರಿಸಿ ಪರಾರಿಯಾಗಿದ್ದ. ಅದನ್ನು ಗಮನಿಸಿದ ಆಟೊ ಚಾಲಕ ಹನುಮಂತ, ಸ್ಕೂಟರ್ ಸವಾರನನ್ನು ಹಿಂಬಾಲಿಸಿದ್ದಾರೆ. ಅಲ್ಲದೆ, ಡಿಕ್ಕಿ ಹೊಡೆದು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅದೇ ವೇಳೆ ಸ್ಥಳೀಯರೂ ಅಲ್ಲಿ ಜಮಾಯಿಸಿದ್ದಾರೆ. ಕೆಲಹೊತ್ತಿನಲ್ಲಿ ಅಲ್ಲಿಗೆ ಪೊಲೀಸರು ಬಂದಿದ್ದಾರೆ.
ಸರ ಕಳವು ಮಾಡಿದ ಆರೋಪಿಯನ್ನು ಕೆ.ಜಿ. ಹಳ್ಳಿಯ ವಿಘ್ನೇಶ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಆತ ಹಲವು ಸರ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ.
ಕಳ್ಳನನ್ನು ಆಟೊ ಚಾಲಕ ಥಳಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೈಟ್ಫೀಲ್ಡ್ ಡಿಸಿಪಿ ಅನುಚೇತ್ ಅವರು ಆಟೊ ಚಾಲಕನಿಗೆ ₹ 10 ಸಾವಿರ ಬಹುಮಾನ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.