ಬೆಂಗಳೂರು: ಜೈಲು ವಾಸದಲ್ಲೂ ಗಾಂಜಾ ತರಿಸಿಕೊಂಡು ಕೊಠಡಿಯಲ್ಲಿ ಇರಿಸಿಕೊಂಡಿದ್ದ ರೌಡಿ ಬಾಂಬೆ ಸಲೀಂ ಹಾಗೂ ಇತರರ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕೇಂದ್ರ ಕಾರಾಗೃಹದ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಸಿಸಿಬಿ ತಂಡದ ಇನ್ಸ್ಪೆಕ್ಟರ್ ಒಬ್ಬರು ದೂರು ನೀಡಿದ್ದಾರೆ. ಅದರನ್ವಯ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಠಾಣೆಯ ಪೊಲೀಸ್ ಮೂಲಗಳು ಹೇಳಿವೆ.
‘ಜೈಲಿನ ಪ್ರತಿಯೊಬ್ಬರ ಕೊಠಡಿ ಪರಿಶೀಲನೆ ನಡೆಸಲಾಗಿದೆ. ರೌಡಿ ಬಾಂಬೆ ಸಲೀಂ ಬಳಿ 200 ಗ್ರಾಂ ಗಾಂಜಾ, 7 ಹುಕ್ಕಾ, 1 ಕಬ್ಬಿಣದ ಸಲಾಖೆಗಳು, 15 ಚಾಕುಗಳು, ಮೊಬೈಲ್ ಹಾಗೂ ಸಿಮ್ ಕಾರ್ಡ್ ಸಿಕ್ಕಿವೆ. 40 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಬಾಂಬೆ ಸಲೀಂ, ಜೈಲಿನಲ್ಲಿ ಕುಳಿತೇ ಅಪರಾಧ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದಾನೆ ಎಂಬುದಾಗಿಯೂ ದೂರಿನಲ್ಲಿ ಹೇಳಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.